ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ’ಎಂಪಿ ಕಾ ಬೇಟಾ’: ಸಂಜಯ್‌ ದತ್‌ ಎಕೆ-56 ಕಥೆ ತೆರಿದಿಟ್ಟ ಬಲ್ಜೀತ್‌

Last Updated 7 ಜುಲೈ 2018, 10:35 IST
ಅಕ್ಷರ ಗಾತ್ರ

ನವದೆಹಲಿ:1993ರ ಸರಣಿ ಸ್ಫೋಟದ ತನಿಖೆ ನಡೆಸುತ್ತಿದ್ದ ಹಿರಿಯ ಐಪಿಎಸ್‌ ಅಧಿಕಾರಿ, ಪ್ರಕರಣದಲ್ಲಿ ಸಂಸತ್‌ ಸದಸ್ಯರೊಬ್ಬರ ಮಗ(ಎಂಪಿ ಕಾ ಬೇಟಾ) ಭಾಗಿಯಾಗಿರುವ ಸಂಶಯ ಇರುವುದಾಗಿಯಷ್ಟೇ ಹೇಳಿದ್ದರು. ಈ ಸಂಶಯದ ಎಳೆಯನ್ನೇ ಹಿಡಿದು ಪ್ರಕರಣದ ಬೆನ್ನು ಹತ್ತಿದ ಪತ್ರಕರ್ತ ಬಲ್ಜೀತ್‌ಗೆ ಸಿಕ್ಕಿ ಸುಳಿವು ’ವಿದೇಶದಲ್ಲಿ ಚಿತ್ರೀಕರಣದಲ್ಲಿರುವ ಬಾಲಿವುಡ್‌ ನಟ’.‌

ಬಲ್ಜೀತ್‌ ಆ ಸಂಸದರ ಮಗನ ಹೆಸರು ತಿಳಿಯುವ ಕೊನೇ ಪ್ರಯತ್ನವಾಗಿ, ಐಪಿಎಸ್‌ ಅಧಿಕಾರಿಯೊಬ್ಬರನ್ನು ಮಾಹಿಮ್‌ ಪ್ರದೇಶದಲ್ಲಿ ಭೇಟಿಯಾಗಿ: ’ನೀವು ಸಂಸದರ ಮಗನನ್ನು ವಶಕ್ಕೆ ಪಡೆದಿದ್ದೀರಿ ಎಂದು ಕೇಳ್ಪಟ್ಟೆ’ ಎನ್ನುತ್ತಾರೆ.

ಅದಕ್ಕೆ ಆ ಅಧಿಕಾರಿ ’ಇಲ್ಲ, ಆತ ವಿದೇಶದಲ್ಲಿ ಚಿತ್ರೀಕರಣದಲ್ಲಿ ಇರುವುದರಿಂದ ನಾವು ಇನ್ನೂ ವಶಕ್ಕೆ ಪಡೆದಿಲ್ಲ’ ಎಂಬ ಉತ್ತರ ಹೊರಬರುತ್ತದೆ.

ಅಲ್ಲಿಗೆ ಬಲ್ಜೀತ್‌ಗೆ ಎಂಪಿ ಕಾ ಬೇಟಾ ’ಸಂಜಯ್‌ ದತ್‌’ ಎಂಬುದು ದೃಢವಾಗುತ್ತದೆ. ದೊಡ್ಡ ಸ್ಟೋರಿಯೂ ಪ್ರಕಟಗೊಳ್ಳುತ್ತದೆ. ಅಲ್ಲಿಂದ ಮುಂದೆ ಸಂಜಯ್‌ ದತ್‌ ಬಂಧನ, ವಿಚಾರಣೆ, ಜೈಲು, ನಡುವೆಯೇ ಸಿನಿಮಾ,...ಈಗ ಈ ಎಲ್ಲದರ ಹೂರಣವೇ ಸಂಜು ಸಿನಿಮಾ.

1993 ಏಪ್ರಿಲ್‌ 14

ಮುಂಬೈನ ಟ್ಯಾಬ್ಲಾಯ್ಡ್‌ಗಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ರೈಂ ರಿಪೋರ್ಟರ್‌ ಬಲ್ಜೀತ್‌ ಪರ್ಮರ್‌ 1993ರ ಏಪ್ರಿಲ್‌ 14ರಂದುನಟ ಸಂಜಯ್‌ ದತ್‌ ಎಕೆ–56 ರೈಫಲ್‌ ಹೊಂದಿರುವ ಸುದ್ದಿಯನ್ನು ಬಹಿರಂಗ ಪಡಿಸಿದರು. ಸುದ್ದಿ ಹೊರಬಂದ ಐದು ದಿನಗಳ ನಂತರ ಸಂಜಯ್ ದತ್ ಬಂಧನಕ್ಕೆ ಒಳಗಾದರು.

ಚಿತ್ರೀಕರಣ ಮುಗಿಸಿ ಮಾರಿಷಸ್‌ನಿಂದ ಭಾರತಕ್ಕೆ ಮರಳುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಬಂಧಿಸಲಾಗಿತ್ತು.ಭಯೋತ್ಪಾದನೆ ಹಾಗೂ ವಿಧ್ವಂಸಕ ಚಟುವಟಿಕೆ (ತಡೆ) ಕಾಯ್ದೆ (ಟಾಡಾ) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಹಲವು ವರ್ಷಗಳ ಕಾನೂನು ಹೋರಾಟದ ನಂತರ 2006ರ ನವಂಬರ್‌ನಲ್ಲಿ ಕಾಡಾ ನ್ಯಾಯಾಲಯ ಸಂಜಯ್‌ ದತ್‌ ವಿರುದ್ಧದ ಭಯೋತ್ಪಾದನೆ ಆರೋಪಗಳನ್ನು ವಜಾಗೊಳಿಸಿ, ಸ್ವರಕ್ಷಣೆಗಾಗಿ ರೈಫಲ್‌ ಹೊಂದಿದ್ದರು ಎಂದಿತು. ಆದರೆ, ಶಸ್ತ್ರಾಸ್ತ್ರ ಕಾಯ್ದೆ ಅಡಿ ಕೋರ್ಟ್ 6 ವರ್ಷಗಳ ಸಜೆ ವಿಧಿಸಿತು.

ಈ ಪ್ರಕರಣದ ಅಧ್ಯಾಯ ಇತ್ತೀಚೆಗೆ ಬಿಡುಗಡೆಯಾದ ಮುನ್ನಾ ಭಾಯ್‌ ಎಂಬಿಬಿಎಸ್ ಖ್ಯಾತಿಯ ಸಂಜಯ್‌ ದತ್‌ ಜೀವನಾಧಾರಿತ ’ಸಂಜು’ ಚಿತ್ರದಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಈ ಚಿತ್ರವನ್ನು ಬಿಲ್ಜೀತ್‌ ಪರ್ಮರ್ ನೋಡದಿರಲು ನಿರ್ಧರಿಸಿದ್ದು, ಈ ಚಿತ್ರ ’ಅತಿ ಬೇಗ ಹಣ ಗಳಿಸುವ ಪ್ರಯತ್ನ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

’ಜೀವನಾಧಾರಿತ ಚಿತ್ರವೆಂದು ಹೇಳಲಾಗುತ್ತಿರುವ ಇದನ್ನು ಯಾರ ಜೀವನಕ್ಕೆ ಸಂಬಂಧಿಸಿದೆಯೋ ಅವರನ್ನು ಪ್ರಸನ್ನಗೊಳಿಸುವ ಉದ್ದೇಶದಿಂದಲೇ ಆಗಿದೆ. ಇದು ಪ್ರೇಕ್ಷಕರಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದಲ್ಲ, ಅವರ ಯೋಚನೆಗಳಿಗೆ ಮಸುಕು ಕವಿಸುವುದಕ್ಕಾಗಿ..’ ಎಂದು ಫೇಸ್‌ಬುಕ್‌ನಲ್ಲಿ ಬಿಲ್ಜೀತ್‌ ಬರೆದುಕೊಂಡಿದ್ದಾರೆ.

’ಡ್ರಗ್ಸ್ ಉಪಯೋಗ ಅಥವಾ ದುರುಪಯೋಗ, ಮಹಿಳೆಯರೊಂದಿಗೆ ಸಮಯ ಕಳೆಯುವುದು, ಮಾಧ್ಯಮವನ್ನು ವ್ಯಸನದಂತೆ ಬಿಂಬಿಸುವುದು, ಸಮಾಜದಲ್ಲಿ ತಪ್ಪು ಹುಡುಕುವುದು, ಅರಿವಿದ್ದೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದು, ಹಿಂದಿನ ತಪ್ಪುಗಳಿಗೆ ಪ್ರಾಯಶ್ಚಿತ್ತ ಇಲ್ಲದಿರುವುದು, ಆರೋಪಿಯ ಅಳು ಮತ್ತು ಅನುಕಂಪ ಸೃಷ್ಟಿಸುವುದು, ಇದೇ ’ಸಂಜು’ ಆಗಿದ್ದರೆ, ಸಿನಿಮಾ ನೋಡುವುದರಿಂದ ದೂರ ಉಳಿಯುವ ನನ್ನ ನಿರ್ಧಾರಕ್ಕೆ ಬೇಸರವಿಲ್ಲ’ ಎಂದು ಜುಲೈ 1ರಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಿದ್ದನ್ನು ಶನಿವಾರ ಮರುಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT