ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೀರೇ ಉತ್ತರ: ದರ್ಶನ ಪಡೆಯಲು ಜನಸಾಗರ

Last Updated 20 ಫೆಬ್ರುವರಿ 2018, 6:09 IST
ಅಕ್ಷರ ಗಾತ್ರ

ಪಾಂಡವಪುರ: ಕ್ಯಾತನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣದ ವೇದಿಕೆಯಲ್ಲಿ ಪುಟ್ಟಣ್ಣಯ್ಯ ಅವರ ಭಾಷಣ ಕೇಳಿದ ಜನರು ಸೋಮವಾರ ಅವರ ಮೃತದೇಹವನ್ನು ಕಂಡು ಕಣ್ಣೀರಾದರು. ಅವರ ಹಾಸ್ಯಮಿಶ್ರಿತ ಭಾಷೆಗೆ ತಲೆದೂಗಿದ್ದ ಜನರು ಸೋಮವಾರ ಗಾಜಿನ ಪೆಟ್ಟಿಗೆಯೊಳಗೆ ಮೌನವಾಗಿ ಮಲಗಿದ್ದವರನ್ನು ಕಂಡು ಮುಮ್ಮಲ ಮರುಗಿದರು.

ಕಳೆದ ಮೂರು ದಶಕಗಳಿಂದ ರೈತ ಪರವಾಗಿ ಹೋರಾಡಿದ್ದ ಪುಟ್ಟಣ್ಣಯ್ಯ ಅವರ ಸಾವು ಇಡೀ ಜಿಲ್ಲೆಯ ಜನತೆಗೆ ಬರಸಿಡಿಲು ಬಡಿದಂತಾಗಿತ್ತು. ಭಾನುವಾರ ರಾತ್ರಿ ಮೃತದೇಹ ಗ್ರಾಮಕ್ಕೆ ಬಂದಾಗ ಇಡೀ ಗ್ರಾಮ ಸಾವಿನ ಮನೆಯಂತಾಗಿತ್ತು. ಇಡೀ ರೈತ ಸಮುದಾಯವನ್ನು ಒಂದು ಕುಟುಂಬದಂತೆ ಕಾಣುತ್ತಿದ್ದ ಅವರು ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತಿದ್ದರು. ಅದನ್ನು ನೆನೆದು ಜನರು ಕಣ್ಣೀರು ಹಾಕಿದರು. ಜಿಲ್ಲೆಯ ರೈತರು ಮಾತ್ರವಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದಲೂ ರೈತಸಂಘದ ಮುಖಂಡರು, ಕಾರ್ಯಕರ್ತರು, ರೈತರು ಬಂದು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಪೊಲೀಸರು ಕ್ರೀಡಾಂಗಣದಲ್ಲಿ ಬ್ಯಾರಿಕೇಡ್‌ ಹಾಕಿ ಜನರನ್ನು ಸಾಲಾಗಿ ಮುಖ್ಯವೇದಿಕೆಗೆ ಕಳುಹಿಸಿ ಅಂತಿಮ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಮೃತದೇಹಕ್ಕೆ ರಾಷ್ಟ್ರಧ್ವಜ ಹಾಗೂ ಹಸಿರು ಹೊದಿಕೆ ಹೊದಿಸಲಾಗಿತ್ತು. ಪುಟ್ಟಣ್ಣಯ್ಯ ಪತ್ನಿ ಸುನಿತಾ ಹಾಗೂ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಹಾಗೂ ಕುಟುಂಬ ಸದಸ್ಯರು ಮೃತದೇಹದ ಪಕ್ಕದಲ್ಲಿ ಕಣ್ಣೀರಾಗಿದ್ದರು. ಮೃತದೇಹದ ದರ್ಶನ ಪಡೆದ ಜನರು ಕುಟುಂಬ ಸದಸ್ಯರ ನೋವಿನಲ್ಲಿ ಒಂದಾದರು.

ಸಂಸದ ಪುಟ್ಟರಾಜು ಬೆಳಿಗ್ಗೆ ಕ್ರೀಡಾಂಗಣಕ್ಕೆ ಬಂದು ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು‘ರೈತ ಕುಲದ ನಾಯಕರಾಗಿದ್ದ ಪುಟ್ಟಣ್ಣಯ್ಯ ಅವರ ಸಾವು ಇಡೀ ದೇಶಕ್ಕೆ ಬಲುದೊಡ್ಡ ನಷ್ಟವಾಗಿದೆ. ಅವರಿಗೆ ಅವರೇ ಸಾಟಿ. ಅವರ ಹೋರಾಟದ ಹಾದಿ ಆದರ್ಶವಾದುದು’ ಎಂದು ಹೇಳಿದರು.

ಜೀವ ಉಳಿಸಿದ್ದರು: ‘ನಮ್ಮ ನಾಯಕರು ನೂರಾರು ಜನರ ಪ್ರಾಣ ಉಳಿಸಿದ್ದರು. ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವಂತೆ ಸದಾ ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಆದರೆ ಈಗ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಕಳೆದ 30 ವರ್ಷಗಳಿಂದ ಅವರ ಜೊತೆಯಲ್ಲಿದ್ದೇನೆ. 1987ರಲ್ಲಿ ಮಂಡ್ಯದಲ್ಲಿ ಜೈಲ್‌ ಭರೋ ಚಳವಳಿ ನಡೆದಾಗ ಎಲ್ಲರನ್ನೂ ಬೆಳಗಾವಿ ಜೈಲಿಗೆ ಹಾಕಿದ್ದರು. ನಮಗೂ ಮೊದಲೇ ಜೈಲಿಗೆ ಹೋಗಿದ್ದ ಪುಟ್ಟಣ್ಣಯ್ಯ ಅವರನ್ನು ನಾನು ಭೇಟಿಯಾದೆ. ಅವರ ಮಾತುಗಳನ್ನು ಕೇಳಿ ಅವರಿಂದ ಪ್ರಭಾವಿತನಾದೆ. ನಾನು ಅವರ ಜೊತೆ ಜೈಲಿನಲ್ಲಿ 17 ದಿನ ಕಳೆದೆ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಹೇಳಿದರು.

‘ನಮ್ಮ ಹಿರಿಯಣ್ಣನನ್ನು ಕಳೆದುಕೊಂಡಿದ್ದೇನೆ. ಅವರಿಗೆ ಸಾವಿರಾರು ಜನರನ್ನು ಹೋರಾಟಕ್ಕೆ ಸೆಳೆಯುವ ಶಕ್ತಿ ಇತ್ತು. ಗ್ರಾಮದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಜನರಿಗೆ ಶಕ್ತಿ ತುಂಬುತ್ತಿದ್ದರು. ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಪಾರ ಪ್ರೋತ್ಸಾಹ ನೀಡುತ್ತಿದ್ದರು. ಅವರಂಥ ನಾಯಕರನ್ನು ಕಳೆದುಕೊಂಡಿದ್ದು ನಮ್ಮ ದುರ್ದೈವ’ ಎಂದು ರೈತ ಸಂಘದ ಮುಖಂಡ ಬೊಮ್ಮೇಗೌಡ ಹೇಳಿದರು.

‘ಕ್ಯಾತನಹಳ್ಳಿ ಗ್ರಾಮದಲ್ಲಿ ಹುಟ್ಟಿ ಬಂದ ಪುಟ್ಟಣ್ಣಯ್ಯ ರಾಷ್ಟಮಟ್ಟದ ನಾಯಕನಾಗಿ ಬೆಳೆದರು. ಅವರ ಹೋರಾಟದ ಹಾದಿಯಲ್ಲಿ ಕಲ್ಲುಮುಳ್ಳು ಕಂಡರೂ ಅವರು ಹಿಂದೆ ಸರಿದವರಲ್ಲ. ಹೋರಾಟದ ಮೂಲಕವೇ ರಾಜಕಾರಣ ಪ್ರವೇಶ ಮಾಡಿದ ಅವರು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿ ಜನರ ಸೇವೆ ಮಾಡಿದರು. ಅವರಿಗೆ ಸಾಯುವ ವಯಸ್ಸು ಆಗಿರಲಿಲ್ಲ. ಸದನದಲ್ಲಿ ರೈತರ ಬಗ್ಗೆ ಮಾತನಾಡುತ್ತಿದ್ದರೆ ಮತ್ತೆ ಮತ್ತೆ ಕೇಳುವಂತಿತ್ತು. ರೈತರು ಅನುಭವಿಸುವ ಕಷ್ಟಗಳನ್ನು ತಮ್ಮ ಸ್ವಂತ ಕಷ್ಟಗಳಂತೆ ಅವರು ಬಿಚ್ಚಿಡುತ್ತಿದ್ದರು’ ಎಂದು ಹಾಸನ ಜಿಲ್ಲೆಯಿಂದ ಬಂದು ಅಂತಿಮ ದರ್ಶನ ಪಡೆದ ರುದ್ರೇಶ್‌ ಹೇಳಿದರು.

ಸಚಿವೆ ಎಂ.ಸಿ.ಮೋಹನಕುಮಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸಿ.ಟಿ.ರವಿ, ನರೇಂದ್ರ ಸ್ವಾಮಿ, ಎಂ.ಕೆ.ಸೋಮಶೇಖರ್‌, ಸಂಸದ ಧ್ರುವನಾರಾಯಣ್‌, ಶಾಸಕ ಅಂಬರೀಷ್‌, ಬಿಜೆಪಿ ಮುಖಂಡ ಶ್ರೀನಿವಾಸ ಪ್ರಸಾದ್‌, ಸಾಹಿತಿ ದೇವನೂರ ಮಹಾದೇವ ಅಂತಿಮ ದರ್ಶನ ಪಡೆದರು.

ರೈತಸಂಘಕ್ಕೆ ಅನಾಥ ಪ್ರಜ್ಞೆ: ಚುಕ್ಕಿ

‘ನಮ್ಮ ತಂದೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರನ್ನು ಪುಟ್ಟಣ್ಣಯ್ಯ ಅವರಲ್ಲಿ ಕಂಡಿದ್ದೇನೆ. ಮನೆಯ ಯಜಮಾನ ತೀರಿ ಹೋದಾಗ ಮೂಡುವ ಅನಾಥ ಪ್ರಜ್ಞೆ ರೈತಸಂಘಕ್ಕೆ ಬಂದಿದೆ. ಅವರಿಗೆ ಅವರೇ ಸಾಟಿ. ಅವರ ಚಳವಳಿಯನ್ನು ಮುಂದುವರಿಸಿಕೊಂಡು ಹೋಗಲು ಯುವಕರು ಚಳವಳಿಗೆ ಧುಮುಕಬೇಕು. ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲ. ಆದರೆ ಚಳವಳಿಯ ಶಕ್ತಿಯನ್ನು ನಮ್ಮ ಜೊತೆ ಬಿಟ್ಟು ಹೋಗಿದ್ದಾರೆ. ಸಂಘಟಿತವಾಗಿ ಹೋರಾಟಕ್ಕೆ ನಿಂತರೆ ಖಂಡಿತಾ ನಾವು ಅವರ ಹೋರಾಟದ ಹಾದಿಯನ್ನು ಮುಂದುವರಿಸಿಕೊಂಡು ಹೋಗಬಹುದು’ ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ದರ್ಶನ್‌ ಪರ ಪ್ರಚಾರ ಮಾಡುವೆ: ಪಚ್ಚೆ

‘ಪುಟ್ಟಣ್ಣಯ್ಯ ಅವರು ಕಳೆದ ವಾರವಷ್ಟೇ ತಮ್ಮ ಮಗ ದರ್ಶನ್‌ ಹಾಗೂ ನನ್ನ ಜೊತೆ ಮಾತನಾಡಿದರು. ನೀವಿಬ್ಬರೂ ಹೋರಾಟದಲ್ಲಿ ತೊಡಗಿದರೆ. ವಿಧಾನಸೌಧದಲ್ಲಿ ಹಸಿರು ಟವೆಲ್‌ ಹಾರಿಸಬಹುದು’ ಎಂದು ಹೇಳಿದ್ದರು. ಆದರೆ ಈಗ ನಮಗೆ ಮಾರ್ಗದರ್ಶನ ಮಾಡುವವರು ಯಾರು ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ತ್ಯಾಗದ ಮೇಲೆ ಕಟ್ಟಿದ ರೈತ ಚಳವಳಿ ಇದು ಎಂದು ಹೇಳಿದ್ದರು. ಈಗ ಅವರ ವಿಚಾರಗಳೇ ನಮಗೆ ಶ್ರೀರಕ್ಷೆಯಾಗಿವೆ. ಅವರ ವಿಚಾರದ ಹಾದಿಯಲ್ಲೇ ನಾವೂ ನಡೆಯುತ್ತೇವೆ’ ಎಂದು ರೈತಸಂಘದ ಮುಖಂಡ ಪಚ್ಚೆ ನಂಜುಂಡಸ್ವಾಮಿ ಹೇಳಿದರು.

‘ಸಾಮೂಹಿಕ ನಾಯಕತ್ವದಲ್ಲಿ ನಾವು ನಡೆಯಬೇಕು. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಪುಟ್ಟಣ್ಣಯ್ಯ ಸಜ್ಜಾಗಿದ್ದರು. ಆದರೆ ಈಗ ಅವರ ಪುತ್ರ ಸ್ಪರ್ಧಿಸಿದರೆ ಪುಟ್ಟಣ್ಣಯ್ಯ ಅವರೇ ಸ್ಪರ್ಧಿಯಾದಂತೆ ಆಗುತ್ತದೆ. ದರ್ಶನ್‌ ಸ್ಪರ್ಧಿಸಿದರೆ ನಾನು ಅವರ ಪರವಾಗಿ ಪ್ರೀತಿಯಿಂದ ಪ್ರಚಾರ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT