ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ದೆಹಲಿ ಮುಖ್ಯ ಕಾರ್ಯದರ್ಶಿ ಅನ್ಷು ಪ್ರಕಾಶ್ ಮೇಲೆ ಎಎಪಿ ಶಾಸಕರು ಹಲ್ಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಕ್ಷಿಪ್ರವಾಗಿ ಕ್ರಮಕೈಗೊಳ್ಳುವಂತೆ ದೆಹಲಿ ಐಎಎಸ್ ಅಧಿಕಾರಿಗಳ ಸಂಘ ಮಂಗಳವಾರ ಒತ್ತಾಯಿಸಿದೆ.
ಜಾಹೀರಾತು ಕುರಿತಾದ ಚರ್ಚೆಗೆ ಸಿಎಂ ಕೇಜ್ರಿವಾಲ್ ಅವರು ಮುಖ್ಯ ಕಾರ್ಯದರ್ಶಿ ಅನ್ಷು ಪ್ರಕಾಶ್ರನ್ನು ಕರೆಸಿಕೊಂಡಿದ್ದಾರೆ. ಸಭೆಯಲ್ಲಿ ಮಾತುಕತೆ ತೀವ್ರ ಸ್ವರೂಪ ಪಡೆದು, ಎಎಪಿಯ ಹಲವು ಶಾಸಕರು ಪ್ರಕಾಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರ ಕನ್ನಡಕ ಕೂಡ ಮುರಿದಿದೆ ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಆನಂತರ ಮುಖ್ಯ ಕಾರ್ಯದರ್ಶಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರನ್ನು ಭೇಟಿ ಮಾಡಿ ಘಟನೆಯ ಕುರಿತು ವಿವರಿಸಿದ್ದಾರೆ.
ಮಂಗಳವಾರ ಐಎಎಸ್ ಅಧಿಕಾರಿಗಳ ಸಂಘದ ವತಿಯಿಂದ ಅಧಿಕಾರಿಗಳು ಲೆ.ಗವರ್ನರ್ ಅವರಲ್ಲಿ ಘಟನೆಯ ಬಗ್ಗೆ ಪ್ರಸ್ತಾಪಿಸಿ ತ್ವರಿತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಚೇರಿ ಸಮಯದ ನಂತರದ ಸಭೆ, ಕಚೇರಿಯ ಹೊರಗಿನ ಸಭೆಗಳಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಕೆಲವು ಕಚೇರಿಗಳ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗಿದೆ.
ಆದರೆ, ಮುಖ್ಯಮಂತ್ರಿಗಳ ಕಚೇರಿ ಈ ಹಲ್ಲೆ ಆರೋಪವನ್ನು ತಳ್ಳಿಹಾಕಿದೆ. ಇದೊಂದು ಅವಾಸ್ತವಿಕ ಹಾಗೂ ಆಧಾರವಿಲ್ಲದ ಆರೋಪ ಎಂದು ಪ್ರತಿಕ್ರಿಯಿಸಿದೆ.
ಹಲ್ಲೆ ಘಟನೆ ಸಂಬಂಧ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಮುಖ್ಯ ಕಾರ್ಯದರ್ಶಿ ಅನ್ಷು ಪ್ರಕಾಶ್ ಮಾತುಕತೆ ನಡೆಸಿದ್ದಾರೆ.
* ಹಲ್ಲೆ ನಡೆಸಿರುವವರ ವಿರುದ್ಧ ಕ್ರಮಕೈಗೊಳ್ಳುವವರೆಗೂ ಕೆಲಸ ಮುಂದುವರಿಸುವುದಿಲ್ಲ. ರಾಜ್ಘಾಟ್ನಲ್ಲಿ ಇಂದು ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸಲಿದ್ದೇವೆ. ಗೃಹ ಸಚಿವರು ಘಟನೆ ಸಂಬಂಧ ವರದಿ ಕೇಳಿದ್ದಾರೆ. –ಡಿ.ಎನ್.ಸಿಂಗ್, ಅಧ್ಯಕ್ಷ, ದೆಹಲಿ ಆಡಳಿತ ಅಧೀನ ಸೇವೆಗಳು
Till action is not taken we are not going to resume work. Today we will take out a candle march at Rajghat in protest. HM has said he has asked for a report: DN Singh, Delhi Administrative Subordinate Services President on alleged assault of Delhi Chief Secy Anshu Prakash pic.twitter.com/VJ63U65Xw1