ಒಂದೇ ದಿನ ಎರಡು ಚಿತ್ರಕ್ಕೆ ಮುಹೂರ್ತ ನೆರವೇರಿಸಿದ ಖುಷಿಯಲ್ಲಿದ್ದರು ನಿರ್ದೇಶಕ ದಯಾಳ್ ಪದ್ಮನಾಭನ್. ‘ಆ ಕರಾಳ ರಾತ್ರಿ’ ಚಿತ್ರದ ಬಳಿಕ ‘ಪುಟ 109’ ತೆರೆಯಲು ಅವರು ಸಜ್ಜಾಗಿದ್ದಾರೆ. ಇದು ಕ್ರೈಮ್ ಥ್ರಿಲ್ಲರ್ ಆಧಾರಿತ ಚಿತ್ರ.
‘ಹಗ್ಗದ ಕೊನೆ’ ಚಿತ್ರ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇದು ಕೂಡ ಅದೇ ಮಾದರಿಯದ್ದು. ಇದಕ್ಕೆ ಕಮರ್ಷಿಯಲ್ ಸ್ಪರ್ಶವಿದೆ. ಉತ್ತಮ ಹೆಸರು ತಂದುಕೊಡಲಿದೆ ಎಂದು ದಯಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಚೆನ್ನೈ ಮೂಲದ ಅರವಿಂದ್ ಈ ಕಥೆ ಹೊಸೆದಿದ್ದಾರೆ. ಇದನ್ನು ಚಿತ್ರಕಥೆಯ ರೂಪಕ್ಕಿಳಿಸಲಾಗಿದೆ. ಈ ಚಿತ್ರದಲ್ಲಿಯೂ ಜಯರಾಂ ಕಾರ್ತಿಕ್ ಅವರೇ ನಾಯಕ. ನೂರು ನಿಮಿಷದ ಈ ಚಿತ್ರದಲ್ಲಿ ಒಂದು ಹಾಡು ಇದೆಯಂತೆ.
‘ಚಿತ್ರದಲ್ಲಿ ನನ್ನದು ಪೊಲೀಸ್ ಅಧಿಕಾರಿಯ ಪಾತ್ರ. ಈ ಪಾತ್ರ ಸವಾಲಿನಿಂದ ಕೂಡಿದೆ’ ಎಂದರು ಜಯರಾಂ ಕಾರ್ತಿಕ್.
ನಾಯಕಿ ವೈಷ್ಣವಿ ಚಂದ್ರನ್, ‘ಇದು ನನ್ನ ಎಂಟನೇ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್ ಇರುವ ಚಿತ್ರದಲ್ಲಿ ನನ್ನದು ಭಿನ್ನವಾದ ಪಾತ್ರ. ದಯಾಳ್ ಸರ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ’ ಎಂದು ಹೊಗಳಿದರು.
ನಟ ನವೀನ್ ಕೃಷ್ಣ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಪಿ.ಎಚ್.ಕೆ. ದಾಸ್ ಅವರ ಕ್ಯಾಮೆರಾ ಚಳಕ ಚಿತ್ರಕ್ಕಿದೆ. ಗೌತಮ್ ಶ್ರೀವತ್ಸ ಸಂಗೀತ ಸಂಯೋಜಿಸಿದ್ದಾರೆ. ಮೂಡಿಗೆರೆ ಬಳಿಯ ಬಾಳೂರು ಗ್ರಾಮದ ಮನೆಯೊಂದರಲ್ಲಿ ಶೂಟಿಂಗ್ ನಡೆಯಲಿದೆ.