ತೀರ್ಥಹಳ್ಳಿ: ಆಹಾರ, ನೀರು ಅರಸಿ ತಾಲ್ಲೂಕಿನ ಹಾರೋಗೊಳಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಟೆಂಕಬೈಲಿನಲ್ಲಿ ಬುಧವಾರ ರಾತ್ರಿ ಕೃಷಿ ಹೊಂಡಕ್ಕೆ ಬಿದ್ದಿದ್ದ ಕಾಡುಕೋಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಮರಳಿ ಕಾಡಿಗೆ ಅಟ್ಟಿದ್ದಾರೆ.
ಅಡಿಕೆ ತೋಟದ ಕೃಷಿಹೊಂಡಕ್ಕೆ ಬಿದ್ದ ಕಾಡುಕೋಣವನ್ನು ಗುರುವಾರ ಬೆಳಿಗ್ಗೆ ಗಮನಿಸಿದ ರೈತ ಸುಬ್ರಮಣ್ಯ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ಹಾಗೂ ಇಲಾಖೆ ಸಿಬ್ಬಂದಿ ಜೆಸಿಬಿ ನೆರವಿನಿಂದ ಕೃಷಿ ಹೊಂಡದ ಸುತ್ತ ದಾರಿ ಮಾಡಿಕೊಟ್ಟು ಕಾಡಿಗೆ ತೆರಳಲು ಕಾಡುಕೋಣಕ್ಕೆ ಅನುವು ಮಾಡಿಕೊಟ್ಟರು.
‘ಕೃಷಿ ಹೊಂಡದ ಮಧ್ಯ ಭಾಗದಲ್ಲಿ ನೀರು ಶೇಖರಣೆಯಾಗುವಂತೆ ರಿಂಗ್ ಬಾವಿಯನ್ನು ನಿರ್ಮಿಸಲಾಗಿತ್ತು. ಕಾಡುಕೋಣ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದೆ. ನೀರು ಕಡಿಮೆ ಇರುವ ಜಾಗದಲ್ಲಿ ಕಾಡುಕೊಣ ಆಶ್ರಯ ಪಡೆದಿತ್ತು’ ಎಂದು ಸ್ಥಳೀಯರಾದ ಹೊನ್ನಾನಿ ದೇವರಾಜ್ ತಿಳಿಸಿದ್ದಾರೆ.