ಕೆರೂರ(ಬಾಗಲಕೋಟೆ ಜಿಲ್ಲೆ): ಇಲ್ಲಿಗೆ ಸಮೀಪದ ಉಗಲವಾಟ, ನೀಲಗುಂದ ಗ್ರಾಮದ ಬಳಿಯ ಕ್ಷೇತ್ರ ರಾಮತೀರ್ಥದಲ್ಲಿ ತಪೋನುಷ್ಠಾನದಲ್ಲಿ ನಿರತರಾಗಿದ್ದ ಸದಾನಂದ ಸ್ವಾಮೀಜಿ ಅವರ ಮೇಲೆ ಗುರುವಾರ ರಾತ್ರಿ ಗುಂಪೊಂದು ಹಲ್ಲೆ ನಡೆಸಿದೆ.
ಸ್ವಾಮೀಜಿಯ ಕೈಕಾಲು ಕಟ್ಟಿ ‘ಮತ್ತು’ ಬರಿಸುವ ಚುಚ್ಚುಮದ್ದು ನೀಡಿ ಆರು ಜನರಿದ್ದ ತಂಡ ನಿಧಿಗಳ್ಳತನಕ್ಕೆ ಯತ್ನಿಸಿದೆ ಎನ್ನಲಾಗಿದೆ.
ಸದಾನಂದ ಸ್ವಾಮೀಜಿ ರಾತ್ರಿ ಗುಡ್ಡದ ಕೆಳಗಿನ ಬಸವೇಶ್ವರ ದೇವಸ್ಥಾನದ ಬಳಿ ತಪೋನಿಷ್ಠರಾಗಿದ್ದರು. ದೇವಸ್ಥಾನದ ಅಡಿಪಾಯದಲ್ಲಿ ಇದೆ ಎನ್ನಲಾದ ನಿಧಿ ಕಳ್ಳತನಕ್ಕೆ ಕಳ್ಳರು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ಅಷ್ಟರಲ್ಲಿ ಭಕ್ತರು ಹಾಗೂ ಆಶ್ರಮದ ಸಹಾಯಕರು ಸ್ಥಳಕ್ಕೆ ಬಂದುದನ್ನು ಅರಿತ ನಿಧಿಗಳ್ಳರು ಸ್ಥಳದಿಂದ ಪರಾರಿಯಾದರು ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ನಿಧಿಗಳ್ಳರು ಬಿಳಿ ಕಾರಿನಲ್ಲಿ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಸ್ವಾಮೀಜಿ ಅವರನ್ನು ಗ್ರಾಮಸ್ಥರು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆರೂರ ಎಎಸ್ಐ ಈರನಗೌಡ್ರ ಹಿರೇಗೌಡ್ರ ಹಾಗೂ ಸಿಬ್ಬಂದಿ ಗ್ರಾಮಸ್ಥರ ಜೊತೆ ಅರಣ್ಯ ಪ್ರದೇಶದಲ್ಲಿ ನಿಧಿಗಳ್ಳರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಬಾದಾಮಿ ಸಿಪಿಐ ಕೆ.ಎಸ್. ಹಟ್ಟಿ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲೆಯಾದ್ಯಂತ ನಾಕಾಬಂದಿ ಹಾಕಿದ್ದು ನಿಧಿಗಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.