ವಿರಾಜಪೇಟೆ: ಪಟ್ಟಣದ ಪಂಜರುಪೇಟೆಯಲ್ಲಿನ ಮರದ ಮಿಲ್ನಲ್ಲಿ ಶುಕ್ರವಾರ ಸಂಜೆ ಅಗ್ನಿ ಆಕಸ್ಮಿಕ ಸಂಭವಿಸಿ ಅಪಾರ ಪ್ರಮಾಣದ ಮರದ ದಿಮ್ಮಿಗಳು ಹಾಗೂ ತುಂಡುಗಳು ಸಂಪೂರ್ಣ ಭಸ್ಮವಾಗಿವೆ.
ಪ್ರಶಾಂತ್ (ಪಾಪು) ಅವರಿಗೆ ಸೇರಿರುವ ಮಿಲ್ನ ಒಳಭಾಗದಲ್ಲಿರುವ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಗೋಣಿಕೊಪ್ಪಲಿನ ಅಗ್ನಿಶಾಮಕ ಠಾಣೆಯಿಂದ ಒಂದೇ ವಾಹನ ಬಂದಿದ್ದ ಕಾರಣ ಬೆಂಕಿ ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಒಣಗಿದ ಮರಮುಟ್ಟುಗಳು ಹೊತ್ತಿ ಉರಿದವು. ಇಡೀ ಆವರಣ ಹೊಗೆಯಿಂದ ಆವೃತ್ತಗೊಂಡಿತ್ತು.
ಅಗ್ನಿಶಾಮಕ ವಾಹನ ನೀರು ತುಂಬಿಸಿಕೊಳ್ಳಲು ಹೋದಾಗ ಬೆಂಕಿ ವ್ಯಾಪಿಸುತ್ತಿತ್ತು. ಸ್ಥಳೀಯರು ಜೆಸಿಬಿ ವಾಹನ ತರಿಸಿ ಉಳಿದ ಮರಮುಟ್ಟುಗಳನ್ನು ಬೆಂಕಿಯಿಂದ ದೂರ ಹಾಕುವ ಕಾರ್ಯ ಕೈಗೊಂಡರೂ ಯಂತ್ರಗಳೂ ಹಾಗೂ ಬೆಲೆಬಾಳುವ ಮರಗಳು ಬೆಂಕಿಗೆ ಆಹುತಿಯಾದವು. ರಾತ್ರಿಯ ತನಕವೂ ಕಾರ್ಯಾಚರಣೆ ನಡೆಯಿತು.