ಕನಕಗಿರಿ: ವಿದ್ಯಾರ್ಥಿ ದೆಸೆಯಿಂದಲೆ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳಸಲು ಶಿಕ್ಷಣ ಇಲಾಖೆ ಮೆಟ್ರಿಕ್ ಮೇಳ ಕಾರ್ಯಕ್ರಮವನ್ನು ಪ್ರತಿ ತಾಲ್ಲೂಕಿನಲ್ಲಿ ಆಯೋಜಿಸಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಾರುತೇಶ ತಿಳಿಸಿದರು.
ಇಲ್ಲಿಗೆ ಸಮೀಪದ ಗೋಡಿನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಗಂಗಾವತಿ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮೆಟ್ರಿಕ್ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣದ ಜತೆಗೆ ಹೊರ ಜಗತ್ತಿನ ತಿಳುವಳಿಕೆ ಸಹ ಮಕ್ಕಳಿಗೆ ಬೇಕಾಗಿದೆ, ಪಾಠ, ಆಟ, ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ವ್ಯಾಪಾರ, ವಹಿವಾಟು, ರಪ್ತು, ಆಮದುಗಳ ಜ್ಞಾನವನ್ನು ಪ್ರತಿಯೊಬ್ಬರು ಪಡೆದು ಕೊಳ್ಳಬೇಕೆಂದು ತಿಳಿಸಿದರು.
ಮುಖ್ಯಶಿಕ್ಷಕ ಶೇಖರನಾಯಕ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನವೀಯ ಹಾಗೂ ವೈಚಾರಿಕ ಶಿಕ್ಷಣದ ಅವಶ್ಯ ಇದೆ.ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಮಾತ್ರವಲ್ಲದೆ ರೈತ, ಸಮಾಜ ಸುಧಾರಕನಾಗುವ ಕಡೆಗೆ ಗಮನ ಹರಿಸಬೇಕೆಂದು ಹೇಳಿದರು, ಸಮೂಹ ಸಂಪನ್ಮೂಲ ವ್ಯಕ್ತಿ ಎಚ್. ಸಂಗಮೇಶ ಮಾತನಾಡಿದರು.
ಶಾಲಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಸಣ್ಣವಕ್ರ, ಗ್ರಾಮ ಪಂಚಾಯಿತಿ ಸದಸ್ಯ ಭೀಮಣ್ಣ ತಳವಾರ, ಶರಣಮ್ಮ ವಕ್ರ, ಪ್ರಮುಖರಾದ ರಾಜುನಾಯಕ ದೊರೆ,ಜಂಬಣ್ಣ ಕನಕಗಿರಿ, ಹನುಮಸಿಂಗ್, ರುದ್ರೇಶ ಕರಡೋಣಿ, ಶರಣಮ್ಮ, ಅಂಬಮ್ಮ, ಅಯ್ಯಪ್ಪ ತಳವಾರ, ಶಿಕ್ಷಕ ವಿರೇಶ, ರತ್ನ ಇದ್ದರು.