ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಆರ್.ರೆಹಮಾನ್‌ ನನ್ನ ದ್ರೋಣಾಚಾರ್ಯ

Last Updated 26 ಫೆಬ್ರುವರಿ 2018, 4:50 IST
ಅಕ್ಷರ ಗಾತ್ರ

ನಮಸ್ಕಾರ, ನಾನು ನಿಮ್ಮ ಮನೆ ಮಗ ಅರ್ಜುನ್‌ ಜನ್ಯ. ಸಂಗೀತದ ಗಂಧ ಗಾಳಿ ಇಲ್ಲದ, ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಹುಡುಗ ನಾನು. ಪ್ರಾಥಮಿಕ ಶಿಕ್ಷಣ ಪಡೆದದ್ದು ಜಯಮಹಲ್‌ನ ಗುಲಾಬಿ ಕಾನ್ವೆಂಟ್‌ನಲ್ಲಿ. ಶೇಷಾದ್ರಿಪುರಂ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿದೆ. ನನಗೆ ಸಂಗೀತದ ಗಂಧ ಹಚ್ಚಿದವರು ನನ್ನ ತಂದೆ ಅಶ್ವತ್ಥ ಕುಮಾರ್‌. ಸಣ್ಣ ವಯಸ್ಸಿನಲ್ಲೇ ನಮ್ಮನ್ನೆಲ್ಲ ತುಂಬಾ ಸಿನಿಮಾಗಳಿಗೆ ಕರೆದುಕೊಂಡು ಹೋಗುತ್ತಿದ್ದರು.

1993ರ ಏಪ್ರಿಲ್ 7ರಂದು ನಮ್ಮ ಬದುಕಿನಲ್ಲಿ ದೊಡ್ಡ ದುರಂತ ನಡೆದುಹೋಯ್ತು. ಈಗ ಬರುತ್ತೇನೆ ಎಂದು ಮನೆಯಿಂದ ಹೊರಹೋಗಿದ್ದ ತಂದೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ನನಗಾಗ 13 ವರ್ಷ. ತಂದೆಯ ನಿಧನಾನಂತರ ನಾನು ಮತ್ತು ನನ್ನಣ್ಣ ಕಿರಣ್‌ ಕುಮಾರ್‌ ಅಮ್ಮನಿಗೆ ಆಸರೆಯಾಗಬೇಕಾಯಿತು. ಆದರೆ ನಮ್ಮಮ್ಮ, ಗಂಡನನ್ನು ಕಳೆದುಕೊಂಡ ದುಃಖವನ್ನೂ ಮೀರಿ, ನಮಗೆ ತಂದೆಯ ಕೊರತೆ ಕಾಡದಂತೆ ಸಾಕಿ ಬೆಳೆಸಿದರು. ಅವರ ತ್ಯಾಗ ಬಹಳ ದೊಡ್ಡದು. ನಾನು ಕನಸು ಕಾಣುತ್ತಿದ್ದ ಕಾಲದಲ್ಲಿ ಆಸರೆಯಾಗಿ ನಿಂತವರು ದಾಕ್ಷಾಯಿಣಿ ಎಂಬ ನನ್ನ ಅಕ್ಕ.

ಅಪ್ಪ ಇದ್ದಷ್ಟು ದಿನ ನನಗೆ ಸಂಗೀತದ ಕಡೆ ಅಷ್ಟೇನೂ ಆಕರ್ಷಣೆ ಇರಲಿಲ್ಲ. ಆದರೆ ಮನಸ್ಸಿನಲ್ಲಿ ಅಚ್ಚೊತ್ತಿದ್ದು ಮಣಿರತ್ನಂ ನಿರ್ದೇಶನದ ‘ರೋಜಾ’ ಸಿನಿಮಾದ ಹಾಡು. ಅದಕ್ಕೆ ಕಾರಣ, ನನ್ನ ತಂದೆಯ ಜೊತೆ ನೋಡಿದ ಕೊನೆಯ ಸಿನಿಮಾ ಅದು. ಅವರಿಗೆ ಬಹಳ ಇಷ್ಟವಾದ ಸಿನಿಮಾ ಅದಾಗಿತ್ತು. ಎ.ಆರ್. ರೆಹಮಾನ್‌ ಅವರ ಬಗ್ಗೆ, ಈ ಚಿತ್ರದಲ್ಲಿನ ಅವರ ಸಂಗೀತದ ಬಗ್ಗೆ ತಂದೆ ಬಹಳ ಚರ್ಚಿಸಿದ್ದರು. ‘ಸಣ್ಣ ಹುಡುಗ ಎಷ್ಟು ಚೆನ್ನಾಗಿ ಸಂಗೀತ ನೀಡಿದ್ದಾನೆ’ ಎಂದು ಹೇಳಿದ್ದು ನನಗೆ ಯಾವತ್ತೂ ಮರೆಯೋದಿಲ್ಲ. ಹಾಗೆಯೇ, ರೆಹಮಾನ್‌ ನನ್ನ ಮನಸ್ಸಿನಲ್ಲಿ ನೆಲೆನಿಲ್ಲಲೂ ತಂದೆಯೇ ಕಾರಣ. ನಾನೂ ಅವರಂತೆ ದೊಡ್ಡ ಸಂಗೀತ ನಿರ್ದೇಶಕನಾಗಬೇಕು ಎಂಬುದು ತಂದೆಯ ಆಸೆಯಾಗಿತ್ತು.


ಬಾಲಕ ಲೋಕೇಶ್‌ ಕುಮಾರ್‌

ತಂದೆಯನ್ನು ಕಳಕೊಂಡ ನಂತರ ನನಗೆ ಓದಿಗಿಂತ ಸಂಗೀತದ ಕಡೆಗೆ ಹೆಚ್ಚು ಒಲವು ಶುರುವಾಯ್ತು. ಅವರ ನೆನಪಾದಾಗಲೆಲ್ಲ ‘ರೋಜಾ’ದ ಹಾಡುಗಳನ್ನು ಕೇಳುತ್ತಿದ್ದೆ. ರೆಹಮಾನ್‌ ಅವರು ತಮ್ಮ ಹಾಡುಗಳ ಮೂಲಕ ನನ್ನನ್ನು ಆವರಿಸಿಕೊಳ್ಳುತ್ತಿದ್ದರು. ಸಂಗೀತ ಕಲಿಯಬೇಕೆಂಬ ಆಸೆ ಬಂತು. ರೆಹಮಾನ್‌ ಅವರು ಕೀಬೋರ್ಡ್‌ ಮೂಲಕ ಸಂಗೀತ ಸೃಷ್ಟಿಸುವ ಕೌಶಲದ ಬಗ್ಗೆ ತಂದೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದುದರಿಂದ ನಾನೂ ಕೀಬೋರ್ಡ್‌ ಕಲಿತೆ. ಆಗ ತುಂಬಾ ಆರ್ಕೆಸ್ಟ್ರಾಗಳು ನಡೆಯುತ್ತಿದ್ದವು.

2002ರಿಂದ 2004ರವರೆಗೆ ಆರ್ಕೆಸ್ಟ್ರಾಗಳಲ್ಲಿ ನಿರಂತರವಾಗಿ ಹಾಡುತ್ತಿದ್ದೆ. ನಾನು ಪ್ರಾಕ್ಟೀಸ್‌ ಮಾಡುವಾಗಲೆಲ್ಲ ರೆಹಮಾನ್‌ ಸರ್‌ ಫೋಟೊದ ಮುಂದೆ ನಿಂತುಕೊಳ್ಳುತ್ತಿದ್ದೆ. ವಾಸ್ತವವೆಂದರೆ ರೆಹಮಾನ್‌ ಅವರಲ್ಲಿ ನಾನು ನನ್ನ ತಂದೆಯನ್ನು ಕಾಣುತ್ತಿದ್ದೆ. ದ್ರೋಣಾಚಾರ್ಯರ ಮಣ್ಣಿನ ಮೂರ್ತಿ ಮಾಡಿ ಅದರ ಮುಂದೆ ಬಿಲ್ವಿದ್ಯೆ ಕಲಿತ ಏಕಲವ್ಯನ ಕತೆ ಕೇಳಿದ್ದೇವೆ. ರೆಹಮಾನ್‌ ಅವರು ನನ್ನ ಪಾಲಿಗೆ ದ್ರೋಣಾಚಾರ್ಯರು. ಅವರನ್ನು ಭಿತ್ತಿಯಲ್ಲಿ ತುಂಬಿಕೊಂಡು ಕಲಿತೆ, ಏಕಲವ್ಯನಂತೆ...

ಶ್ರೀನಿವಾಸಣ್ಣನೇ ಕಾರಣ: ಚಿತ್ರರಂಗದಲ್ಲಿ ಇವತ್ತು ನನ್ನ ಹೆಸರು ದಾಖಲಾಗಿದ್ದರೆ ಅದಕ್ಕೆ ಮೂಲ ಕಾರಣ ಶ್ರೀನಿವಾಸ್‌ ಎಂಬ ನನ್ನ ದೊಡ್ಡಮ್ಮ ಮಗ. ಅವರು ಆಟೊ ಚಾಲಕರಾಗಿದ್ದರು. ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾ, ಕೀಬೋರ್ಡ್‌ ನುಡಿಸುತ್ತಾ ಸ್ವಲ್ಪ ಮಟ್ಟಿಗೆ ಹೆಸರು ಮಾಡಿದ್ದ ದಿನಗಳವು.

ಒಂದು ದಿನ ಶ್ರೀನಿವಾಸಣ್ಣ ತಮ್ಮ ಆಪ್ತರಾದ ಶೇಖರ್‌ ಎಂಬುವವರ ಮೂಲಕ ವಿ.ಮನೋಹರ್‌ ಅವರ ಬಳಿ ಕರೆದುಕೊಂಡು ಹೋದರು. ಆ ದಿನ ನನ್ನ ಅದೃಷ್ಟದ ಬಾಗಿಲು ತೆರೆದ ದಿನ ಎಂದೇ ಹೇಳಬೇಕು. ಮನೋಹರ್‌ ಸರ್‌ ಅವತ್ತು ಆಡಿಷನ್‌ನಲ್ಲಿದ್ದರು. ಅವರ ಕೀಬೋರ್ಡ್‌ ಪ್ಲೇಯರ್‌ ಬಂದಿರಲಿಲ್ಲ. ನನ್ನ ಬಗ್ಗೆ ಕೇಳಿದ್ದೇ ತಡ, ‘ಈ ಹುಡುಗನನ್ನೇ ಹಾಕ್ಕೊಂಡು ರೆಕಾರ್ಡಿಂಗ್‌ ಮುಗಿಸಿ’ ಎಂದುಬಿಟ್ಟರು! ನಾನು ನುಡಿಸಿದೆ. ಅವರಿಗೆ ಬಹಳ ಮೆಚ್ಚುಗೆಯಾಯಿತು. ರೆಕಾರ್ಡಿಂಗ್‌ ಕೆರಿಯರ್‌ ಶುರುವಾಗಿದ್ದು ಹಾಗೆ. ಮನೋಹರ್‌ ಸರ್‌ ನನ್ನನ್ನು ಅಷ್ಟಕ್ಕೇ ಬಿಡಲಿಲ್ಲ. ಪಾಪ ಪಾಂಡು, ಸಿಲ್ಲಿ ಲಲ್ಲಿ ಮುಂತಾದ ಧಾರಾವಾಹಿಗಳಿಗೆ, ಸಿನಿಮಾಗಳಿಗೂ ರೆಕಾರ್ಡಿಂಗ್‌ಗೆ ಅವಕಾಶ ಕೊಡುತ್ತಾ ಹೋದರು.

ಇದಾದ ಬಳಿಕ , ಇನ್ನೊಬ್ಬ ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಅವರಲ್ಲಿ ಕೆಲಸ ಮಾಡಿದೆ. ನನ್ನ ಪಾಲಿಗೆ ಮನೋಹರ್‌ ಮತ್ತು ಕಲ್ಯಾಣ್‌ ಇಬ್ಬರೂ ಗುರುಗಳು. ಕಲ್ಯಾಣ್‌ ಅವರೊಂದಿಗೆ ಎರಡು ವರ್ಷ ಸಾಕಷ್ಟು ಪ್ರಾಜೆಕ್ಟ್‌ಗಳನ್ನು ಮಾಡಿದೆ. ಎಷ್ಟೋ ಜನರಿಗೆ ಗೊತ್ತಿಲ್ಲ, ನನಗೆ ತಂದೆ ತಾಯಿ ಇಟ್ಟ ಹೆಸರು ಲೋಕೇಶ್‌ ಕುಮಾರ್‌. ಆಪ್ತರೆಲ್ಲಾ ಲೋಕಿ ಎಂದೇ ಕರೀತಿದ್ರು. ಕಲ್ಯಾಣ್‌ ಅವರಂತೂ ನನ್ನನ್ನು ತಮ್ಮ, ಲೋಕಿ ಎಂದೇ ಕರೆಯೋದು. ನನಗೆ ‘ಅರ್ಜುನ್‌’ ಎಂಬ ಹೆಸರಿಟ್ಟಿದ್ದು ಕಲ್ಯಾಣ್‌ ಸರ್‌.

</p><p><strong>ಇದರ ಹಿನ್ನೆಲೆ ಹೇಳ್ತೀನಿ ಕೇಳಿ...</strong> ನಾನು ಸಾಕಷ್ಟು ಶ್ರಮಪಟ್ಟು ಸಂಗೀತ ನೀಡುತ್ತಿದ್ದರೂ ಹಿಟ್‌ ಆಗುತ್ತಿರಲಿಲ್ಲ. ಮೂರು ವರ್ಷ ನನ್ನ ಹಾಡುಗಳು ಬಾಕ್ಸಾಫೀಸ್‌ನಲ್ಲಿ ಹೀಗೇ ಆದಾಗ ಎಷ್ಟೋ ನಿರ್ದೇಶಕರು, ನಿರ್ಮಾಪಕರು ‘ಅವನನ್ನು ಹಾಕ್ಕೊಂಡು ಚಿತ್ರ ಮಾಡಿದ್ರೆ ಚಿತ್ರ ಸೋಲುತ್ತೆ’ ಎಂದು ಸಾರಾಸಗಟಾಗಿ ಹೇಳುತ್ತಿದ್ದರು. ಇದರಿಂದ ನನಗೆ ಅಳು ಬರುತ್ತಿತ್ತು. ಆಗ ಒಂದು ದಿನ ಕಲ್ಯಾಣ್‌ ಸರ್‌ಗೆ ಫೋನ್‌ ಮಾಡಿ, ‘ನನಗೊಂದು ಹೆಸರು ಇಡಿ’ ಎಂದು ಹೇಳಿದೆ. ‘ಅರ್ಜುನ್‌’ ಅಂತ ಇಟ್ಕೋಪ್ಪಾ ಅಂದ್ರು.</p><p>ನಾನು ಮಾಡಿದ ಮೊದಲ ಸಿನಿಮಾ ‘ಆಟೋಗ್ರಾಫ್‌ ಪ್ಲೀಸ್‌’. 2006ರಲ್ಲಿ. ಅದೊಂದು ಡಾಕ್ಯುಮೆಂಟರಿಯಾದರೂ ಅದಕ್ಕಾಗಿ ಮಾಡಿದ ಆಲ್ಬಂನಿಂದಾಗಿ ಚಿತ್ರರಂಗದಲ್ಲಿ ಅವಕಾಶಗಳು ಬರತೊಡಗಿದವು. 2009, ನನ್ನ ಬದುಕಿನಲ್ಲಿ ಮತ್ತೊಂದು ಮಹತ್ವದ ವರ್ಷ. ‘ಬಿರುಗಾಳಿ’ ಸಿನಿಮಾ ಇದಕ್ಕೆ ಕಾರಣ. ಅದರ ‘ಮಧುರ ಪಿಸುಮಾತಿಗೆ’ ಹಾಗೂ ಇತರ ಹಾಡುಗಳು ಹಿಟ್‌ ಆದವು. ನನಗೆ ದೊಡ್ಡ ಬ್ರೇಕ್‌ ಸಿಕ್ಕಿತು. ಅಷ್ಟು ಹೊತ್ತಿಗೆ ಪಟ್ರೆ ಲವ್ಸ್ ಪದ್ಮ, ಧಿಮಾಕು, ಸ್ಲಂ ಬಾಲ, ದೀನ, ಮಚ್ಚಾ ಎಂಬ ಸಿನಿಮಾಗಳಿಗೆ ಸಂಗೀತ ನೀಡಿದ್ದೆ.</p><p><strong>ಬೆನ್ನಿಗೆ ನಿಂತವರು: </strong>ಪ್ರತಿಯೊಬ್ಬರ ಬದುಕಿನಲ್ಲಿಯೂ ಯಾರದ್ದಾದರೂ ಪ್ರೋತ್ಸಾಹ ಸಿಕ್ಕಿರುತ್ತದೆ. ನನಗೆ ಪ್ರೋತ್ಸಾಹ ನೀಡಿದವರಲ್ಲಿ ದುನಿಯಾ ವಿಜಯ್‌ ಪ್ರಮುಖರು. ಅವರ ಸಿನಿಮಾಗಳ ಸಂಗೀತವನ್ನು ನನಗೆ ಕೊಡುತ್ತಿದ್ದರು. ಒಷ್ಟು ಹೊತ್ತಿಗೆ ನಾನು 12 ಸಿನಿಮಾಗಳಿಗೆ ಸಂಗೀತ ನೀಡಿದ್ದರೂ ನನಗೆ ಹೇಳಿಕೊಳ್ಳುವಂತಹ ತೃಪ್ತಿ ಆಗಿರಲಿಲ್ಲ. ನನ್ನ ಸಂಗೀತದ ಮೂಲಕವೇ ಚಿತ್ರ ಹಿಟ್‌ ಆಗಬೇಕು ಎಂಬುದು ನನ್ನ ಆಸೆಯಾಗಿತ್ತು.</p><p>ಈ ವಿಷಯವನ್ನು ಯಾರೋ ಸುದೀಪ್‌ ಅವರಿಗೆ ಹೇಳಿದ್ರಂತೆ. ಅವರು ಆಗ ತಮಿಳಿನ ‘ಕೆಂಪೇಗೌಡ’ದಲ್ಲಿ ನಟಿಸುತ್ತಿದ್ದರು. ಅದರಲ್ಲಿ ತಮಿಳಿನದ್ದೇ ಎರಡು ಹಾಡುಗಳನ್ನು ಉಳಿಸಿಕೊಳ್ಳುವ ಯೋಚನೆ ಇತ್ತಂತೆ. ಆದರೆ ನಾವೇ ಹೊಸದಾಗಿ ಕೊಡೋಣ ಅಂದಾಗ ಸುದೀಪ್‌ ಒಪ್ಪಿದ್ರು. ಈ ಚಿತ್ರದ ಬಳಿಕ ಸುದೀಪ್‌ ಅವರು ಸಾಕಷ್ಟು ಅವಕಾಶಗಳನ್ನು ಕೊಡುತ್ತಾ ಬಂದಿದ್ದಾರೆ. ಅವರ ಮಾತು, ಸ್ಫೂರ್ತಿ ತುಂಬುವ ರೀತಿ, ವ್ಯಕ್ತಿತ್ವ ಮಾದರಿಯಾದುದು. ಅವರನ್ನು ನನ್ನ ‘ಗಾಡ್‌ಫಾದರ್‌’. ಅರ್ಜುನ್‌ ಸಂಗೀತದ ಮೂಲಕ ಸಿನಿಮಾ ಹಿಟ್‌ ಆಗಬೇಕು ಎಂಬ ಆಸೆಯನ್ನು ಸುದೀಪ್‌ ಅವರಲ್ಲಿ ಹೇಳಿಕೊಂಡಾಗ ‘ಜನ್ಯ’ ಅಂತ ಸೇರಿಸ್ಕೊ’ ಅಂದ್ರು. ಅವತ್ತಿನಿಂದ ನಾನು ‘ಅರ್ಜುನ್‌ ಜನ್ಯ’ ಆದೆ.<br/>&#13; <img alt="" src="https://cms.prajavani.net/sites/pv/files/article_images/2018/02/25/arjun-2.jpg" style="width: 600px; height: 400px;" data-original="/http://www.prajavani.net//sites/default/files/images/arjun-2.jpg"/><br/>&#13; <em><strong>ಎಡದಿಂದ ಬಲಕ್ಕೆ: ಅರ್ಪಿತಾ (ಅಣ್ಣನ ಮಗಳು), ಅತ್ತಿಗೆ ಶಿಲ್ಪಾ, ಅಣ್ಣ ಕಿರಣ್‌ ಕುಮಾರ್‌, ತಾಯಿ ಅನಸೂಯ, ಪತ್ನಿ ಗೀತಾ, ಮಗಳು ರಜಿತಾ ಅವರೊಂದಿಗೆ ಜನ್ಯ</strong></em></p><p>‘ಕೆಂಪೇಗೌಡ’ ಮುಗಿಯುತ್ತಿದ್ದಂತೆ ಶರಣ್‌ ನಾಯಕತ್ವದ ‘ರ‍್ಯಾಂಬೊ’ ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌ ಆಫರ್‌ ಕೊಟ್ರು. ಅಲ್ಲಿಂದ ಶರಣ್‌ ಮತ್ತು ನನ್ನ ಕಾಂಬಿನೇಷನ್‌ ಶುರುವಾಯ್ತು. ‘ಹಿಸ್ಟರಿ’ಯ ‘ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು’, ‘ಅಧ್ಯಕ್ಷ’ದಲ್ಲಿ ಟೈಟಲ್ ಸಾಂಗು ಮತ್ತು ‘ಓಪನ್‌ ಹೇರು ಬಿಟ್ಕೊಂಡು’ ಹಾಡುಗಳು ಹಿಟ್‌ ಆದವು. ಈಗ ‘ರ‍್ಯಾಂಬೊ 2’ ಬರ್ತಿದೆ. ಗಣೇಶ್‌ ಅವರ ‘ರೋಮಿಯೊ’, ಶಿವಣ್ಣ ಅವರ ‘ಭಜರಂಗಿ’, ಸುದೀಪ್‌ ಅವರ ರಾಜಾನಾಯಕ ಮತ್ತು ಹೆಬ್ಬುಲಿ, ದರ್ಶನ್‌ ಅವರ ಚಕ್ರವರ್ತಿ, ತಾರಕ... ಹೀಗೆ ಒಂದಾದ ಮೇಲೊಂದು ದೊಡ್ಡ ಸ್ಟಾರ್‌ಗಳ ಸಿನಿಮಾಗಳು ನನಗೆ ಸಿಕ್ಕಿದವು. ಇಡೀ ನನ್ನ ಬದುಕಲ್ಲಿ ಮರೆಯಲಾಗದ ಬ್ರೇಕ್‌ ಕೊಟ್ಟದ್ದು ‘ಚೌಕ’ ಸಿನಿಮಾದ ‘ಅಪ್ಪಾ ಐ ಲವ್‌ ಯೂ ಪಾ’ ಹಾಡು. ಇಡೀ ಕರ್ನಾಟಕದ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚಿನ ಹಾಡಾಗಿದೆ.</p><p>ನನ್ನ ಬದುಕಿನ ರೋಲ್‌ಮಾಡೆಲ್‌ ರೆಹಮಾನ್‌ ಸರ್. ಅವರ ಸಂಗೀತವಷ್ಟೇ ಅಲ್ಲ, ವ್ಯಕ್ತಿತ್ವ, ಪ್ರತಿಭೆಗಳನ್ನು ಬೆಳೆಸುವ ರೀತಿ, ಸಾಮಾಜಿಕ ಕಳಕಳಿ ಬಹಳ ಇಷ್ಟ. ಅವರು ನನ್ನ ಪಾಲಿನ ಗುರು, ದೇವರು, ಒಡಹುಟ್ಟು, ಸ್ಪೂರ್ತಿ... ಹೀಗೆ ಎಲ್ಲವೂ ಆಗಿದ್ದಾರೆ. ನನಗೆ ಸಿಕ್ಕಿದ ಪ್ರೋತ್ಸಾಹದಿಂದಲೇ ನಾನು ಬೆಳೆದೆ. ಹಾಗಾಗಿ ನಾನೂ ಒಂದಷ್ಟು ಜನರಿಗೆ ಪ್ರೋತ್ಸಾಹ ಕೊಟ್ಟಿದ್ದೇನೆ.</p><p>ನಾನು ಓದಿದ್ದು ಹತ್ತನೇ ತರಗತಿ ಮಾತ್ರ. ಆದರೆ ನಮ್ಮ ಪ್ರತಿಭೆಯನ್ನು ನಾವು ಗುರುತಿಸಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ, ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನವಿದ್ದರೆ ಒಂದು ದಿನ ಗೆದ್ದೇ ಗೆಲ್ಲುತ್ತೇವೆ. ಯಾವ ಅವಕಾಶವನ್ನೂ ಬಿಡಬಾರದು, ಬೆಳೆಯುವ ಕನಸುಳ್ಳವರು ತಾವಾಗಿ ಅವಕಾಶಗಳನ್ನು ಕೇಳಿಕೊಂಡು ಹೋಗಬೇಕು ಎಂದು ನಂಬಿದವನು ನಾನು.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT