ಮಂಗಳೂರು:‘ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಲ್ಲಿ ಇರುವಂತೆ ಸನಾತನ ಹಿಂದೂ ಧರ್ಮದಲ್ಲೂ ಒಬ್ಬನೇ ದೇವರನ್ನು ನಂಬುತ್ತೇವೆ. ಆದರೆ, ಬೇರೆ ಬೇರೆ ಹೆಸರುಗಳಲ್ಲಿ ಪೂಜಿಸುವುದರಿಂದ ತಪ್ಪಾಗಿ ಅರ್ಥೈಸಲಾಗುತ್ತಿದೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಅನಾರೋಗ್ಯದ ಕಾರಣದಿಂದ ಒಂದು ತಿಂಗಳಿನಿಂದ ವಿಶ್ರಾಂತಿಯಲ್ಲಿದ್ದ ಸ್ವಾಮೀಜಿ, ಇಲ್ಲಿನ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದೂ ಧರ್ಮದಲ್ಲಿ ಒಬ್ಬನೇ ದೇವರಿಗೆ ಹಲವು ನಾಮಗಳಿವೆ. ಏಕದೇವತಾವಾದವನ್ನು ವೈದಿಕ ಹಿಂದೂ ಧರ್ಮದಿಂದ ಪಡೆಯಲಾಗಿದೆ. ಶಂಕರಾ
ಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರು ಕೂಡಾ ಏಕ ದೇವರ ಬಗ್ಗೆ ಪ್ರತಿಪಾದಿಸಿದ್ದಾರೆ ಎಂದರು.
ಪರಮಾತ್ಮನ ಸಂದೇಶವನ್ನು ಉಪನಿಷತ್ನ ಮೂಲಕ ನೀಡಲಾಗಿದೆ. ರಾಷ್ಟ್ರದ ಕಾನೂನು ಮೀರಿ ರಾಷ್ಟ್ರಧ್ವಜವನ್ನು ಗೌರವಿಸುವವರು ಹೇಗೆ ರಾಷ್ಟ್ರ ಭಕ್ತನಾಗುವುದಿಲ್ಲವೋ, ಹಾಗೇ ಧಾರ್ಮಿಕ ಕಾನೂನು ಮೀರಿ ವೈದಿಕ ಧರ್ಮ ಅನುಸರಿಸಿದರೆ ಧರ್ಮ ಭಕ್ತನಾಗುವುದಿಲ್ಲ. ವೈದಿಕ ಧರ್ಮದ ನಿಯಮಗಳನ್ನು ಅನುಸರಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.