ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಚಂದು ನಾಯಕ ತಾಂಡಾದಲ್ಲಿ ಹೆಣ್ಣು ಶಿಶುವಿನ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಹಾಗೂ ಮಧ್ಯವರ್ತಿಯಾಗಿದ್ದ ಆಶಾ ಕಾರ್ಯಕರ್ತೆ ಸೇರಿ ಐದು ಮಂದಿಯನ್ನು ಕುಂಚಾವರಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಅನುಸೂಯಾ, ರಾಮಚಂದ್ರ ದಂಪತಿಗೆ ಜ.9ರಂದು ನಾಲ್ಕನೇ ಶಿಶು ಜನಿಸಿತು. ಅದು ಹೆಣ್ಣು ಆಗಿದ್ದರಿಂದ ಮನೆಗೆ ತಂದರೆ ಕೊಲ್ಲುವುದಾಗಿ ಪತಿಯು ಪತ್ನಿಗೆ ಎಚ್ಚರಿಕೆ ನೀಡಿದ್ದ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಶಿಶುವನ್ನು ಕೊಲ್ಲುವುದು ಬೇಡ. ಬೇರೆಯವರಿಗೆ ಸಾಕಲು ನೀಡಬಹುದು ಎಂದು ಕೆಲವರು ಸಲಹೆ ನೀಡಿದ್ದರಿಂದ ಆತ ಒಪ್ಪಿಕೊಂಡಿದ್ದ. ಫೆ. 8ರಂದು ಆಶಾ ಕಾರ್ಯಕರ್ತೆ ಸುವರ್ಣಾ ಮೂಲಕ ವ್ಯವಹಾರ ಕುದುರಿಸಿ ₹15 ಸಾವಿರಕ್ಕೆ ಟಿ.ಪೌಲ್ ದಂಪತಿಗೆ ಮಾರಾಟ ಮಾಡಿದ್ದ.
ಶಿಶು ಆರೋಗ್ಯವಾಗಿದ್ದು, ಅದನ್ನು ಕಲಬುರ್ಗಿಯ ಅಮೂಲ್ಯ ಶಿಶುಗೃಹಕ್ಕೆ ದಾಖಲಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ತಿಳಿಸಿದ್ದಾರೆ.