ಅಂತರರಾಷ್ಟ್ರೀಯ ನ್ಯಾಯ ಮಂಡಲಿಗೆ ಭಾರತದ ಪ್ರವೇಶ ಇನ್ನು ಸಾಕು: ಮುರಾರಜಿ ದೇಸಾಯಿ ಸ್ಪಷ್ಟನೆ
ನವದೆಹಲಿ, ಫೆ. 27– ಅಂತರರಾಷ್ಟ್ರೀಯ ಪಂಚಾಯಿತಿಗೆ ಭಾರತ ತನ್ನ ಸಮಸ್ಯೆಗಳನ್ನು ಕೊಂಡೊಯ್ಯುವುದು ಇನ್ನು ಸಾಕು ಎಂಬುದಾಗಿ ಉಪಪ್ರಧಾನ ಮಂತ್ರಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.
ಕಛ್ ದೋಣಿಗಳ ಅಕ್ರಮ ಪ್ರವೇಶ: ಪಾಕಿಸ್ತಾನಕ್ಕೆ ಮತ್ತೆ ಪ್ರತಿಭಟನೆ
ನವದೆಹಲಿ, ಫೆ. 27– ಕಛ್ ಕರಾವಳಿಯ ಜಖಾವು, ಮಾಂಡ್ವಿ ಮತ್ತು ಕೋಟೇಶ್ವರ್ಗಳ ಬಳಿ ಭಾರತೀಯ ಜಲ ಪ್ರದೇಶದೊಳಕ್ಕೆ ಪಾಕಿಸ್ತಾನಿ ದೋಣಿಗಳ ಅಕ್ರಮ ಪ್ರವೇಶ ಮುಂದುವರೆಯುತ್ತಿರುವುದರ ವಿರುದ್ಧ ಭಾರತವು ಪಾಕಿಸ್ತಾನಕ್ಕೆ ಇಂದು ಮತ್ತೆ ಪ್ರತಿಭಟನೆ ಸೂಚಿಸಿದೆ.
ಬರಗಾಲ ನಿವಾರಣೆಗೆ ಕಾಯಂ ಮಂಡಲಿ ರಚನೆಗೆ ಒತ್ತಾಯ
ಬೆಂಗಳೂರು, ಫೆ. 27- ಪದೇ ಪದೇ ಬರಗಾಲಕ್ಕೆ ತುತ್ತಾಗುವ ಬಯಲು ನಾಡಿಗೆ ಕಾಯಂ ಪರಿಹಾರ ಮಂಡಲಿ ರಚಿಸಬೇಕೆಂದು ಶ್ರೀ ಹೆಚ್.ಸಿ. ಲಿಂಗಾ
ರೆಡ್ಡಿ ಅವರು (ಕಾಂ) ಇಂದು ವಿಧಾನ ಸಭೆಯಲ್ಲಿ ಒತ್ತಾಯ ಮಾಡಿದರು.
ರಾಜ್ಯಪಾಲರ ಭಾಷಣಕ್ಕೆ ವಂದನೆ ಅರ್ಪಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ಹಲವರು ಇತ್ತೀಚೆಗೆ ನಗರದಲ್ಲಿ ನಡೆದ ಗೋಳೀಬಾರನ್ನು ಖಂಡಿಸಿದರೆ ಪಕ್ಷೇತರ ಸದಸ್ಯ ಶ್ರೀ ಸದಾಶಿವಪ್ಪ ಪಾಟೀಲರು ಶಾಂತಿಪಾಲನೆಗಾಗಿ ಅದು ಅಗತ್ಯವೆಂದು ಸಮರ್ಥಿಸಿದರಲ್ಲದೆ ಹಿಂದೀ ವಿರೋಧಿ ಚಳವಳಿಯನ್ನು ‘ನಾಚಿಕೆಗೇಡು’ ಎಂದು ವರ್ಣಿಸಿದರು.
2–3 ತಿಂಗಳಲ್ಲಿ ಭಾಷಾ ಪ್ರಶ್ನೆಯ ಸರ್ವಸಮ್ಮತ ಇತ್ಯರ್ಥ
ಬೆಂಗಳೂರು, ಫೆ. 27– ಈಗಿನ ಶಿಕ್ಷಣ ವರ್ಷ ಮುಗಿಯುವ ಮುನ್ನ ಅಂದರೆ ಮಂದಿನ ಎರಡು ಮೂರು ತಿಂಗಳಲ್ಲಿ ಭಾಷಾ ಸಮಸ್ಯೆಗೆ ಸರ್ವಸಮ್ಮತ ಪರಿಹಾರವನ್ನು ಕಂಡು ಹಿಡಿಯುವ ದೃಢ ವಿಶ್ವಾಸವನ್ನು ಕಾಂಗ್ರೆಸ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ವ್ಯಕ್ತಪಡಿಸಿದರು.