ಬಜೆಟ್ನಲ್ಲಿ 290 ಕೋಟಿ ರೂ. ಖೋತಾ; ಹೊಸ ತೆರಿಗೆಗಳಿಂದ 65 ಕೋಟಿ ರೂ. ಹೆಚ್ಚು ಆದಾಯ
ನವದೆಹಲಿ, ಫೆ. 29– ತೆರಿಗೆದಾರನಿಗೆ ‘ಪುಟ್ಟ ಶಸ್ತ್ರಕ್ರಿಯೆ’ ಮೂಲಕ ಹೊಸ ಕರಗಳಿಂದ 65 ಕೋಟಿ ರೂಪಾಯಿ ಹೆಚ್ಚು ಆದಾಯ. ಆದರೂ 290 ಕೋಟಿ ರೂಪಾಯಿಯಷ್ಟು ಬೆರಗು ಬಡಿಸುವ ಪ್ರಮಾಣದ ಸಮಗ್ರ ಖೋತಾ. ಇದು ಇಂದು ಲೋಕ ಸಭೆಯ ಮುಂದೆ ಕೇಂದ್ರ ಹಣಕಾಸು ಸಚಿವ ಮುರಾರಜಿ ದೇಸಾಯಿ ಅವರು ಮಂಡಿಸಿದ 1968–69ನೆ ಸಾಲಿನ ಬಜೆಟ್ನ ಮುಖ್ಯಾಂಶ.
*
ಕನ್ನಡಕ್ಕೆ ಮೂರು ಉಪಕಾರ ಆಚಾರ್ಯ ಡಿ.ವಿ.ಜಿ. ಆಶಯ: ಪರಿಷತ್ ಗೌರವಾರ್ಪಣೆ
ಬೆಂಗಳೂರು, ಫೆ. 29– ಬಸವನಗುಡಿ ನಾಗಸಂದ್ರ ರಸ್ತೆಯಲ್ಲಿರುವ ಅವರ ಮನೆಯ ಸಣ್ಣ ಹಜಾರವೇ ಪರಿಷನ್ಮಂದಿರದ ಸಭಾಂಗಣ.
ಒಂದು ಕಡೆ ಹಳೆಯ ಸೋಫಾ ಮೇಲೆ ಆರಾಧಿಸಿ ಕನ್ನಡಿಗರಿಗೆ ಕಣ್ತುಂಬ ದರ್ಶನ ಮಾಡಿಸಿರುವ ಸರಸ್ವತಿಯ ಮಹಾ ಪೂಜಾರಿ ಶ್ರೀ ಡಿ.ವಿ.ಜಿ.
ಭಕ್ತಿಯಿಂದ ಬಂದಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಕೃತಜ್ಞತೆಯನ್ನೂ ಗೌರವವನ್ನೂ ಅರ್ಪಿಸಿತು.
ಪರಿಷತ್ತಿನ ಅಧ್ಯಕ್ಷ ಶ್ರೀ ಜಿ. ವೆಂಕಟಸುಬ್ಬಯ್ಯ ಅವರು ಹಾರ ಹಾಕಿ ಶಾಲು ಹೊದಿಸಿದರು.
*
ಓವರ್ ಡ್ರಾಫ್ಟ್ಗಳನ್ನು ನಿಲ್ಲಿಸಲು ರಾಜ್ಯಗಳಿಗೆ ಮನವಿ
ನವದೆಹಲಿ, ಫೆ.29– ಓವರ್ ಡ್ರಾಫ್ಟ್ಗಳನ್ನು ನಿಲ್ಲಿಸಬೇಕೆಂದು ಶ್ರೀ ದೇಸಾಯಿಯವರು ರಾಜ್ಯಗಳಿಗೆ ಮನವಿ ಮಾಡಿಕೊಂಡಿದ್ದಾರೆ. ರಿಸರ್ವ್ ಬ್ಯಾಂಕ್ ನೀಡಿರುವ ಈಗಿನ ಸೌಲಭ್ಯಗಳನ್ನುಕುರಿತು ಮರು ಪರಿಶೀಲನೆ ಮಾಡಬೇಕೆಂದು ರಾಜ್ಯಗಳು ಕೇಳಲಾರವೆಂದು ಅವರು ಆಶಿಸಿದ್ದಾರೆ.
*
ಕೈಗಾರಿಕೆ, ಕೃಷಿ ಕ್ಷೇತ್ರದ ಉತ್ಪಾದನೆಯ ಏರಿಕೆ: ಮುರಾರಜಿ ಆಶಾಭಾವ
ನವದೆಹಲಿ, ಫೆ. 29– ಕೈಗಾರಿಕಾ ಮತ್ತು ವ್ಯವಸಾಯ ಉತ್ಪನ್ನಗಳು ಗಣನೀಯವಾಗಿ ಅಧಿಕಗೊಂಡು ಬೆಲೆಗಳು ಸ್ಥಿಮಿತಕ್ಕೆ ಬರಲಿರುವ ಕಾರಣ ಮುಂದಿನ ಆರ್ಥಿಕ ಸಾಲನ್ನು ಆಶೆ, ವಿಶ್ವಾಸಗಳಿಂದ ಎದುರಿಸಬಹುದಾಗಿದೆಯೆಂದು ಉಪಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯಿ ಅವರು ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಾ ತಿಳಿಸಿದರು.