ರಾಜ್ಯ ನೌಕರರಿಗೆ ಬಜೆಟ್ ಬಳುವಳಿ: ಕೇಂದ್ರ ಮಟ್ಟದ ತುಟ್ಟಿಭತ್ಯ
ಬೆಂಗಳೂರು, ಮಾ. 1– ಸರಕಾರಿ ನೌಕರರಿಗೆ ಇಂದಿನಿಂದ ಕೇಂದ್ರದ ತುಟ್ಟಿಭತ್ಯ. ನಿವೃತ್ತ ನೌಕರರಿಗೂ ಪರಿಹಾರ ಭೂಕಂದಾಯದ ರದ್ದಿಲ್ಲ. ಹೊಸ ತೆರಿಗೆಯ ಹೊರೆ ಇಲ್ಲ. ಜೊತೆಗೆ 11.98 ಕೋಟಿ ರೂಪಾಯಿ ಉಳಿತಾಯ.
ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದ 68-69ನೇ ಸಾಲಿನ ಬಜೆಟ್ನ ಪ್ರಮುಖ ಅಂಶಗಳಿವು.
ಭತ್ಯ ಏರಿಕೆ ವೆಚ್ಚ ತುಂಬುವ ಬಗ್ಗೆ ಯೋಚನೆ
ಬೆಂಗಳೂರು, ಮಾ. 1– ನೌಕರರ ತುಟ್ಟಿಭತ್ಯದ ಏರಿಕೆಯಿಂದಾಗಿ ವರ್ಷಕ್ಕೆ ಹೆಚ್ಚು ಖರ್ಚಾಗಲಿರುವ ಸುಮಾರು 8 ಕೋಟಿ ರೂಪಾಯಿ ಹಣಕ್ಕೆ 68–69ನೇ ಸಾಲಿನ ಬಜೆಟ್ನಲ್ಲಿ ವ್ಯವಸ್ಥೆ ಮಾಡಿಲ್ಲ.
ಸದ್ಯದಲ್ಲಿ ಭೂಕಂದಾಯ ರದ್ದಾಗದು
ಬೆಂಗಳೂರು, ಮಾ.1– ಸುಗಮಗೊಳಿಸಿ, ವಿಶಾಲ ತಳಹದಿಯ ಆಧಾರದ ಮೇಲೆ ವ್ಯವಸಾಯ ವರಮಾನ ತೆರಿಗೆಯನ್ನು ಜಾರಿಗೆ ತರುವ ಘಟ್ಟವನ್ನು ವ್ಯವಸಾಯಿಕ ಅರ್ಥ ವ್ಯವಸ್ಥೆ ಮುಟ್ಟುವ ತನಕ ಭೂ ಕಂದಾಯವನ್ನು ರದ್ದು ಮಾಡಬಾರದೆಂದು ರಾಜ್ಯ ಸರಕಾರ ತೀರ್ಮಾನಿಸಿದೆ.
ಎರಡು ವರ್ಷದಲ್ಲಿ ಆಹಾರ ಸ್ವಯಂಪೂರ್ಣತೆ
ಬೆಂಗಳೂರು, ಮಾ.1– ಇನ್ನೆರಡು ವರ್ಷಗಳಲ್ಲಿ ರಾಜ್ಯದಲ್ಲಿ ಆಹಾರ ಸ್ವಯಂ ಪರಿಪೂರ್ಣತೆಯ ಸಾಧನೆ. ಅರ್ಥಸಚಿವ ಶ್ರೀ ಹೆಗಡೆ ಅವರು ತಮ್ಮ ಬಜೆಟ್ ಭಾಷಣದಲ್ಲಿ ‘69–70ನೇ ಸಾಲಿನ ಅಂತ್ಯದೊಳಗೆ ಆಹಾರೋತ್ಪತ್ತಿಯಲ್ಲಿಸ್ವಯಂ ಪರಿಪೂರ್ಣತೆಯನ್ನು ಸಾಧಿಸುವ ವಿಶ್ವಾಸ ನನಗಿದೆ’ ಎಂದರು.
ಕಛ್ ತೀರ್ಪಿನ ಜಾರಿ; ಸೋಮವಾರ ಭಾರತ–ಪಾಕ್ ಪ್ರತಿನಿಧಿಗಳ ಸಭೆ
ನವದೆಹಲಿ, ಮಾ. 1– ಕಛ್ ಅಂತರರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪನ್ನು ಅನುಷ್ಠಾನಕ್ಕೆ ತರಲು ಅಗತ್ಯಕ್ರಮಗಳನ್ನು ರೂಪಿಸುವ ಬಗ್ಗೆ ಚರ್ಚೆನಡೆಸಲು ಭಾರತ–ಪಾಕಿಸ್ತಾನ ಸರ್ಕಾರಗಳ ಪ್ರತಿನಿಧಿಗಳು ಸೋಮವಾರ ಇಲ್ಲಿ ಸಭೆ ಸೇರಲಿದ್ದಾರೆ.