ಬೆಂಗಳೂರು: ಮಳೆ ನೀರು ಸಂಗ್ರಹ ಹಾಗೂ ನೀರು ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಸಂಜಯನಗರದಲ್ಲಿ ಭಾನುವಾರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ‘ನೀರು ಯೋಜನೆ’ ಕಾರ್ಯಕ್ರಮ ನಡೆಯಿತು.
ಮಳೆ ನೀರು ಸಂಗ್ರಹ ತಂತ್ರಜ್ಞಾನದ ಅನೇಕ ಮಾದರಿಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು. ನೀರು ಸಂರಕ್ಷಣೆ ಹಾಗೂ ಮಿತಬಳಕೆಯ ಬಗ್ಗೆ ವಾರ್ಡ್ನ ನಿವಾಸಿಗಳು ತಿಳಿದುಕೊಂಡರು.
ನೀರು ಬಳಕೆ ಇಲ್ಲದೆ ಕಾರು ಸ್ವಚ್ಛಗೊಳಿಸುವ ಮಾದರಿಯ ಯಂತ್ರವು ಗಮನ ಸೆಳೆಯಿತು.
ಸ್ಥಳೀಯ ನಿವಾಸಿ ವಿಜ್ಞಾನ್ ಗೌಡ, ‘ಕಾರುಗಳನ್ನು ಸ್ವಚ್ಛಗೊಳಿಸಲು ಸಾಮಾನ್ಯವಾಗಿ ಜನರು ನೀರನ್ನು ಪೋಲು ಮಾಡುತ್ತಾರೆ. ಇದನ್ನು ತಪ್ಪಿಸಲು ಯಂತ್ರ ಸಹಕಾರಿ’ ಎಂದರು.
ಹೆಬ್ಬಾಳ ಶಾಸಕ ವೈ.ಎ.ನಾರಾಯಣಸ್ವಾಮಿ, ‘ಈ ಭಾಗದ 20 ಸರ್ಕಾರಿ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ. ಅವುಗಳ ಸುತ್ತ 20 ಅಡಿ ಆಳ ಹಾಗೂ ಮೂರು ಅಡಿ ಅಗಲದ ಗುಂಡಿ ತೋಡಿ ನೀರು ಇಂಗಲು ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
ನೀರು ಉಳಿಸುವ ಬಗ್ಗೆ ಪಾಲಿಕೆ ಸದಸ್ಯ ಆನಂದ್ ಮಾಹಿತಿ ಪಡೆದರು.