ಕಲಬುರ್ಗಿ: ‘ಲಿಂಗಾಯತ–ವೀರಶೈವ ಧರ್ಮ ಒಡೆದವರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು’ ಎಂದು ರಂಭಾಪುರಿ ಶ್ರೀ ಹೇಳಿದರು.
‘ಧರ್ಮ ಬೇರ್ಪಡಿಸಿದರೆ ನಾವು ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ. ಚುನಾವಣೆ ಹೊತ್ತಲ್ಲಿ ಲಿಂಗಾಯತ –ವೀರಶೈವ ಧರ್ಮವನ್ನು ಬೇರ್ಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹಾನಿ ಆಗುವುದು ಖಚಿತ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಇದುವರೆಗೆ ಯಾವ ಮುಖ್ಯಮಂತ್ರಿಯೂ ಧರ್ಮದ ವಿಚಾರದಲ್ಲಿ ತಲೆ ಹಾಕಿಲ್ಲ. ಆದರೆ ಸಿದ್ದರಾಮಯ್ಯ ಈ ವಿಚಾರದಲ್ಲಿ ಮೂಗು ತೂರಿಸೋದು ಸರಿಯಲ್ಲ’ ಎಂದು ಹೇಳಿದರು.
‘ತಜ್ಞರ ಸಮಿತಿಯು ವರದಿಯನ್ನು ಸಲ್ಲಿಸಲು ಆರು ತಿಂಗಳ ಸಮಯವಾಕಾಶ ಕೋರಿತ್ತು. ಆದರೆ ಸಮಿತಿ ಮೇಲೆ ಮುಖ್ಯಮಂತ್ರಿ ಮತ್ತು ಸಚಿವರು ಸೇರಿ ಒತ್ತಡ ಹೇರಿ, ತರಾತುರಿಯಲ್ಲಿ ವರದಿ ಸಲ್ಲಿಕೆ ಮಾಡಿಸಿಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಹುಸಂಖ್ಯಾತ ಲಿಂಗಾಯತರನ್ನು ಅಲ್ಪಸಂಖ್ಯಾತರ ಗುಂಪಿಗೆ ಸೇರಿಸುವ ಕ್ರಮ ಸರಿಯಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಸಿಎಂ ಇಕ್ಕಟ್ಟಿಗೆ ಸಿಲುಕಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.