ಹಾರಂಗಿ, ಹೇಮಾವತಿ ಯೋಜನೆ ವಿಳಂಬ ಪ್ರತಿಭಟಿಸಿ ಪತ್ರ
ಬೆಂಗಳೂರು, ಮಾ. 13– ಹಾರಂಗಿ, ಹೇಮಾವತಿ ಯೋಜನೆಗಳಿಗೆ ತಾಂತ್ರಿಕ ಅನುಮತಿ ದೊರಕಿಸಿಕೊಡಲು ಕೇಂದ್ರ ಸರಕಾರ ವಿಳಂಬ ಮಾಡುತ್ತಿದ್ದು ರಾಜ್ಯ ಸರಕಾರ ಅದನ್ನು ಪ್ರತಿಭಟಿಸಿ ಪತ್ರ ಬರೆದಿದೆ.
ರಾಜ್ಯಸಭೆ ಚುನಾವಣೆ: ಎಂ.ವಿ. ರಾಮರಾವ್, ಪಾಟೀಲ್ ಪುಟ್ಟಪ್ಪ ಕಾಂಗ್ರೆಸ್ ಅಭ್ಯರ್ಥಿಗಳು
ನವದೆಹಲಿ, ಮಾ. 12– ರಾಜ್ಯಸಭೆಗೆ ನಡೆಯುವ ದ್ವಿವಾರ್ಷಿಕ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಎಂ.ವಿ.ರಾಮರಾವ್ ಮತ್ತು ಶ್ರೀ ಪಾಟೀಲ್ ಪುಟ್ಟಪ್ಪ ಅವರನ್ನು ಪಕ್ಷದ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವುದಾಗಿ ಕಾಂಗ್ರೆಸ್ ಪಾರ್ಲಿಮೆಂಟರಿ ಮಂಡಳಿ ಇಂದು ಇಲ್ಲಿ ಪ್ರಕಟಿಸಿತು.
ಇನ್ನೊಂದು ವರ್ಣಭೇದ ಬಹಿಷ್ಕಾರ ಮಸೂದೆಗೆ ಅಮೆರಿಕ ಸೆನೆಟ್ ಅಸ್ತು
ವಾಷಿಂಗ್ಟನ್, ಮಾ. 12– ರಾಷ್ಟ್ರದ ಸುಮಾರು ಶೇಕಡ 70ರಷ್ಟು ವಸತಿ ಸೌಕರ್ಯದಲ್ಲಿ ವರ್ಣಭೇದವನ್ನು ಬಹಿಷ್ಕರಿಸುವ ನಾಗರಿಕ ಹಕ್ಕು ಮಸೂದೆಯನ್ನು ಸೆನೆಟ್ ನಿನ್ನೆ 70–80 ಮತಗಳಿಂದ ಅಂಗೀಕರಿಸಿತು.
ವೈಫಲ್ಯದ ಹಂತದಲ್ಲಿ ಅಂಕ್ಟಾಡ್ ಸಮ್ಮೇಳನ
ನವದೆಹಲಿ, ಮಾ. 12– ಕಳೆದ ಐದು ವಾರಗಳಿಂದ ಸಮಾವೇಶಗೊಂಡಿರುವ ಅಂಕ್ಟಾಡ್ ಮಹಾಧಿವೇಶನ ವಿಫಲಗೊಳ್ಳುವ ಹಂತದಲ್ಲಿದೆಯೆಂದು ಸೆಕ್ರೆಟರಿ ಜನರಲ್ ಡಾ. ರಾಲ್ ಪ್ರೆಬಿಷ್ ಇಂದು ಇಲ್ಲಿ ಎಚ್ಚರಿಕೆ ನೀಡಿದರು.
ಮುಂಬೈ ಕರ್ನಾಟಕ ಪ್ರದೇಶದ ಪ್ರಾತಿನಿಧ್ಯಕ್ಕೆ ಶಾಸಕರ ಒತ್ತಾಯ
ಬೆಂಗಳೂರು, ಮಾ. 12– ವಿಧಾನಸಭಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಹಿಂದಿನ ಮುಂಬೈ ಕರ್ನಾಟಕದ ಪ್ರದೇಶಕ್ಕೆ ಪ್ರಾತಿನಿಧ್ಯವಿಲ್ಲವೆಂದು ಆ ಪ್ರದೇಶದ ಕಾಂಗ್ರೆಸ್ ಶಾಸಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಶ್ರೀ ಸಿ.ಎಂ. ದೇಸಾಯಿ ಮತ್ತಿತರ 9 ಮಂದಿ ಶಾಸಕರು ಕಾಂಗ್ರೆಸ್ ಅಧ್ಯಕ್ಷರು, ಪ್ರಧಾನಿ ಹಾಗೂ ಉಪ ಪ್ರಧಾನಿ ಅವರುಗಳಿಗೆ ತಂತಿ ಕಳುಹಿಸಿ ಕಾಂಗ್ರೆಸ್ ಸ್ಪರ್ಧಿಸುವ ನಾಲ್ಕು ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಮುಂಬೈ–ಕರ್ನಾಟಕಕ್ಕೆ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆಂದು ತಿಳಿದುಬಂದಿದೆ.
ಸ್ವತಂತ್ರ ಮಾರಿಷಸ್ ರಾಷ್ಟದ ಉದಯ
ಪೋರ್ಟ್ಲೂಯಿ, ಮಾರಿಷಸ್, ಮಾ. 12– ಒಂದೂವರೆ ಶತಮಾನಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಂಡ ಮಾರಿಷಸ್ನಲ್ಲಿ ಇಂದು ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಮುವತ್ತೊಂದು ಕುಶಾಲು ತೋಪುಗಳನ್ನು ಹಾರಿಸಿದ ನಂತರ ಕಪ್ಪು ಸಮವಸ್ತ್ರ ಧರಿಸಿದ್ದ ಪೊಲೀಸ್ ಅಧಿಕಾರಿ ಚತುವರ್ಣದ ಮಾರಿಷಸ್ ಧ್ವಜಾರೋಹಣ ಮಾಡಿದಾಗ ಜನಗಳು ಸ್ವಾತಂತ್ರ್ಯ ಘೋಷ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.