ರಾಮನಗರ: ಕನಕಪುರ ತಾಲ್ಲೂಕಿನ ಜೈನ್ ಪಬ್ಲಿಕ್ ಶಾಲೆ ಹಾಗೂ ಜೈನ್ ವಿದ್ಯಾನಿಕೇತನ್ ಶಾಲೆಗಳಲ್ಲಿ ಯಡವನಹಳ್ಳಿ ಗ್ರಾಮದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕಾಯ್ದೆ (ಆರ್ಟಿಇ) ಅಡಿಯಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಪದಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಮಾರೇಗೌಡ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಯಡವನಹಳ್ಳಿ ಗ್ರಾಮಕ್ಕೆ ಈ ಶಾಲೆಗಳು ಕೇವಲ 100 ಮೀಟರ್ ಅಂತರವನ್ನು ಹೊಂದಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಗ್ರಾಮ ಆರ್ಟಿಇ ವ್ಯಾಪ್ತಿಗೆ ಸೇರಿಲ್ಲ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ವಾಸಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಶಾಲೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಇಲ್ಲಿನ ಮಕ್ಕಳು ಈ ಶಾಲೆಗಳಿಗೆ ಸೇರದಂತೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಎಸ್ಎಸ್ ಡಿ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ ಆರೋಪಿಸಿದರು.
ಗ್ರಾಮದ ಮಕ್ಕಳಿಗೆ ಆರ್ಟಿಇ ಅಡಿಯಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಶಿಕ್ಷಣ ಇಲಾಖೆಯ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಬನವಾಸಿಗೋಪಾಲ್, ಯಡವನಹಳ್ಳಿಚಂದ್ರು, ಶಿವಲಿಂಗಯ್ಯ, ಲಕ್ಷ್ಮಣ್ ಕಲ್ಬಾಳ್, ಹೇಮಂತ್ ಇದ್ದರು.