ಮದ್ದೂರು: ಪಟ್ಟಣ ಪುರಸಭೆ ವ್ಯಾಪ್ತಿಯ ವಿವಿಧ ಸುಂಕ ವಸೂಲಾತಿಗಳ ಹಕ್ಕು ಪಡೆಯುವ ಸಂಬಂಧ ಮಂಗಳವಾರ ನಡೆದ ಬಹಿರಂಗ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಹರಾಜುದಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಅಧ್ಯಕ್ಷೆ ಲತಾ ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಹರಾಜು ಪ್ರಕ್ರಿಯೆಯಲ್ಲಿ ಮೊದಲಿಗೆ ಪಟ್ಟಣದ ವಾಪ್ತಿಯಲ್ಲಿ ಖಾಸಗಿ ಬಸ್ ಮತ್ತು ಇನ್ನಿತರ ವಾಹನ ನಿಲ್ದಾಣದ ಸುಂಕ ವಸೂಲಾತಿ ಬಹಿರಂಗ ಹರಾಜು ನಡೆಯಿತು.
ಈ ಸಂದರ್ಭದಲ್ಲಿ ₹8.3 ಲಕ್ಷ ವನ್ನು ಸರ್ಕಾರಿ ಬಿಡ್ ಆಗಿ ನಿಗದಿಪಡಿಸಲಾಯಿತು. ಸರ್ಕಾರಿ ಬಿಡ್ ಹಣ ಹೆಚ್ಚಾಗಿದೆ ಎಂದು ದೂರಿದ ಹರಾಜುದಾರರು, ಯಾರೂ ಹರಾಜು ಕೂಗದೆ ತಟಸ್ಥರಾದರು.
ಇದರಿಂದ ಅಸಮಾಧಾನಗೊಂಡ ಪುರಸಭಾ ಮುಖ್ಯಾಧಿಕಾರಿ ಕುಮಾರ್, ‘ಹರಾಜುದಾರರು ಬಿಡ್ ಕೂಗದಿದ್ದರೆ, ಠೇವಣಿ ಹಣ ₹ 80 ಸಾವಿರವನ್ನು ಮುಟ್ಟುಗೋಲು ಹಾಕಲಾಗುವುದು’ ಎಂದರು.
ಇದರಿಂದ ಆಕ್ರೋಶಗೊಂಡ ಹರಾಜುದಾರರು ಸಭೆಯಲ್ಲಿ ಗದ್ದಲ ಆರಂಭಿಸಿದರು. ಹರಾಜುದಾರ ಬಸವರಾಜು ಮಾತನಾಡಿ, ‘ವಾಹನ ನಿಲ್ದಾಣದ ಸುಂಕ ವಸೂಲಾತಿ ಹಕ್ಕನ್ನು ₹ 8.3 ಲಕ್ಷ ಪಡೆದರೆ ನಮಗೆ ತೀವ್ರ ನಷ್ಟವಾಗಲಿದೆ ಎಂದರು.