ಆನೇಕಲ್: ಬೇರೆ ಬೇರೆ ಧರ್ಮ ಜಾತಿಗಳಿಗೆ ಪ್ರತ್ಯೇಕ ದೇವಾಲಯಗಳಿವೆ. ಆದರೆ ಎಲ್ಲರಿಗೂ ಒಂದೇ ನ್ಯಾಯ ದೇವಾಲಯ, ನ್ಯಾಯ ದೇವತೆಯ ಮುಂದೆ ಎಲ್ಲರೂ ಸಮಾನರು. ವಕೀಲರುಈ ದೃಷ್ಠಿಯಿಂದ ತಮ್ಮ ಕಾರ್ಯವನ್ನು ನಿರ್ವಹಿಸಬೇಕು ಎಂದು ಹೈಕೋರ್ಟ್ನ ನ್ಯಾಯಾಧೀಶ ಎಲ್.ನಾರಾಯಣಸ್ವಾಮಿ ತಿಳಿಸಿದರು.
ಅವರು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹೆಚ್ಚುವರಿ ನ್ಯಾಯಾಲಯ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜನರಿಗೆ ಜಾತಿ, ಮತ, ಬಣ್ಣ, ಲಿಂಗ ತಾರತಮ್ಯವಿಲ್ಲದೇ ನ್ಯಾಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ವಕೀಲರು ನ್ಯಾಯಾಧೀಶರು ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ವಕೀಲರು ರಾಜೀ ಸಂಧಾನದ ಮೂಲಕ ವ್ಯಾಜ್ಯಗಳನ್ನು ಪರಿಹರಿಸಲು ಚಿಂತನೆ ನಡೆಸಬೇಕು. ಉಚಿತ ಕಾನೂನು ನೆರವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅರ್ಹರಿಗೆ ಈ ಸೌಲಭ್ಯ ದೊರೆಯುವಂತೆ ಮಾಡಬೇಕಾಗಿದೆ ಎಂದರು.
ನ್ಯಾಯಾಲಯದ ಆವರಣಕ್ಕೆ ಶುದ್ಧಕುಡಿಯುವ ನೀರಿನ ಘಟಕ ಹಾಗೂ ಕೊಳವೆ ಬಾವಿ ಮಂಜೂರು ಮಾಡಲಾಗಿದೆ. ನ್ಯಾಯಾಲಯದ ಆವರಣದಲ್ಲಿನ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳಾಗಿ ಮಾಡಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪಿ.ಕೃಷ್ಣಭಟ್ ಮಾತನಾಡಿ ಆನೇಕಲ್ ನ್ಯಾಯಾಲಯದಲ್ಲಿ 20ಸಾವಿರ ಸಿವಿಲ್ ವ್ಯಾಜ್ಯಗಳಿವೆ. ಇವುಗಳ ವಿಲೇವಾರಿಗೆ ವಕೀಲರ ಸಹಕಾರ ಅವಶ್ಯಕತೆಯಿದೆ ಎಂದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ನ್ಯಾಯಾಲಯಗಳಲ್ಲಿ ಗುಮಾಸ್ತರ ಹುದ್ದೆಗಳು ಖಾಲಿ ಬೀಳುತ್ತಿವೆ. ಇದನ್ನು ಪರಿಹರಿಸಿ ನ್ಯಾಯಾಲಯದ ಕಲಾಪಗಳು ಸುಗಮವಾಗಿ ನಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಕಾನೂನು ಇಲಾಖೆಯ ಕಾರ್ಯದರ್ಶಿ ಎನ್.ಸಿ.ಶ್ರೀನಿವಾಸ್, ವಕೀಲರ ಸಂಘದ ಅಧ್ಯಕ್ಷ ಸಂಪತ್ಕುಮಾರ್, ಕಾರ್ಯದರ್ಶಿ ವಿಜಯ್ಕುಮಾರ್, ವೈ.ಮಂಜುನಾಥ್ ಹಾಜರಿದ್ದರು.