ಸಿರವಾರ: ಸಮೀಪದ ಬಲ್ಲಟಗಿ ಗ್ರಾಮದಲ್ಲಿ ಬಾಳೆ ಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಅಡ್ಡ ಪಲ್ಲಕ್ಕಿ ಮಹೋತ್ಸವ ಬುಧವಾರ ಸಂಜೆ ಅದ್ಧೂರಿಯಾಗಿ ನಡೆಯಿತು.
ಬಲ್ಲಟಗಿಯ ಲಿಂಗೈಕ್ಯ ಬಸವಲಿಂಗಯ್ಯ ತಾತನವರ ಆರಾಧನೆ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಅಡ್ಡ ಪಲ್ಲಕ್ಕಿ ಮಹೋತ್ಸವು ಸುಮಂಗಲಿಯರ ಪೂರ್ಣ ಕುಂಭ, ಕಳಸದೊಂದಿಗೆ ನಂದಿಕೋಲು ಕುಣಿತ, ವಿವಿಧ ವಾದ್ಯ ಮೇಳದವರೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಗ್ರಾಮದಲ್ಲಿ ಲಿಂಗೈಕ್ಯ ಬಸವಲಿಂಗ ತಾತನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.
ಸಂಜೆ ನಡೆದ ಧರ್ಮಸಭೆಯಲ್ಲಿ ರಂಭಾಪುರಿ ಮಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯರು ಧರ್ಮೋಪದೇಶ ನೀಡಿದರು.
ಧರ್ಮ ಸಭೆಯ ನೇತೃತ್ವವನ್ನು ನೀಲಗಲ್ಲು ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
ರಾಯಚೂರು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸಿಂಧನೂರು ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ವಿವಿಧ ಮಠಾಧೀಶರು ಮತ್ತು ಮುಖಂಡರು ಇದ್ದರು.