ಕಮಲಾಪುರ: ‘ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ನವರು ಸಭೆ, ಸಮಾರಂಭ, ಬೀದಿ–ಬೀದಿಗಳಲ್ಲಿ ಹೇಳುತ್ತ ಹೊರಟಿರುವ ಸಂವಿಧಾನದ 371 (ಜೆ) ಕಲಂ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ’ ಎಂದು ಮಾಜಿ ಸಚಿವ ಬಾಬುರಾವ ಚವಾಣ್ ಆರೋಪಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ.
ಅವುಗಳನ್ನು ಮೀಸಲಾತಿಯಡಿ ತುಂಬಿಕೊಳ್ಳಲು ಸರ್ಕಾರ ಮುಂದೆ ಬರುತ್ತಿಲ್ಲ. ಕಾಂಗ್ರೆಸ್ ನಾಯಕರು ಭಾಷಣದಲ್ಲಿ ಅಂಕಿ– ಅಂಶ ಕೊಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಅದೆಲ್ಲ ಸುಳ್ಳು’ ಎಂದರು.
‘ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದ್ದು, 371 (ಜೆ) ಕಲಂ ಪ್ರಕಾರ ಎಲ್ಲ ಸವಲತ್ತುಗಳನ್ನು ಒದಗಿಸಲಾಗುವುದು. ಗುಳೆ ತಡೆಗಟ್ಟಲು ಲಂಬಾಣಿ ಸಮಾಜದವರಿಗಾಗಿ ಸಂಡೂರ ಮಾದರಿ ಕರಕುಶಲ ವಸ್ತು ತಯಾರಿಕೆ ಘಟಕ ಸ್ಥಾಪಿಸುತ್ತೇನೆ’ ಎಂದು ಹೇಳಿದರು.