ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯಕ್ಕೆ ವಾಲುತ್ತಿರುವ ರಾಜಕಾರಣಿಗಳು

ಜಾನಪದ ವಿದ್ವಾಂಸ ಪ್ರೊ.ಹಿ.ಶಿ.ರಾಮಚಂದ್ರಗೌಡ ವಿಷಾದ
Last Updated 17 ಮಾರ್ಚ್ 2018, 7:09 IST
ಅಕ್ಷರ ಗಾತ್ರ

ಮೈಸೂರು: ಧಾರ್ಮಿಕ ಮುಖಂಡರು ಹಾಗೂ ರಾಜಕಾರಣಿಗಳು ಮೌಢ್ಯಾಚರಣೆಯತ್ತ ವಾಲುತ್ತಿದ್ದಾರೆ ಎಂದು ಜಾನಪದ ವಿದ್ವಾಂಸ ಪ್ರೊ.ಹಿ.ಶಿ.ರಾಮಚಂದ್ರಗೌಡ ವಿಷಾದ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಕುವೆಂಪುನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಕ್ರಿಯಾ ವೇದಿಕೆ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಕನಕದಾಸರ ಪ್ರಸ್ತುತತೆ: ಯುವ ಸ್ಪಂದನ’  ವಿದ್ಯಾರ್ಥಿ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೌಢ್ಯ, ಕಂದಾಚಾರಗಳನ್ನು ಆಚರಿಸಿ ಮರಳಿ ಆದಿ ಮಾನವರಾಗಲು ಅವರು ಹೊರಟಿದ್ದಾರೆ. ತಮ್ಮ ಜತೆಗೆ ಬಹುಜನರನ್ನೂ ಕರೆದೊಯ್ಯುವ ಹುನ್ನಾರ ಅವರದು. ಇದರಿಂದ ಸಮಾಜದ ‍ಪ್ರಗತಿಯ ಬದಲಿಗೆ ವಿಗತಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನಕದಾಸರ ಕಾಲದಲ್ಲಿ ದಾಸ ಎಂದರೆ ಭಕ್ತ ಎಂಬ ಪರಿಕಲ್ಪನೆಯಿತ್ತು. ಈಗ ದಾಸ ಎನ್ನುವುದು ಗುಲಾಮ ಎಂಬ ಅರ್ಥ ನೀಡುತ್ತಿದೆ. ಭಕ್ತಿಯನ್ನು ವಿಕಾಸ ಮಾರ್ಗ ಎಂದು ಆಗ ಕರೆಯಲಾಗುತ್ತಿತ್ತು. ಸಂಸ್ಕೃತಿಯ ಬಗ್ಗೆ ಚಿಂತಿಸುವಾಗ ಇವುಗಳ ಅರಿವು ಇರಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಮೌಢ್ಯದ ವಿರುದ್ಧ ಹೋರಾಡುವಲ್ಲಿ ಆರಂಭದ ಹೆಜ್ಜೆಗಳನ್ನು ದಾಸ ಪರಂಪರೆ ಇಟ್ಟಿತು’ ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಾಗ ಕೇವಲ ಪಠ್ಯಾಧಾರಿತ ಅಂಶಗಳನ್ನೇ ಗಮನಿಸಬಾರದು. ಕನಕನ ಕಿಂಡಿ ಒಂದು ಮಾದರಿಯಷ್ಟೇ. ಕನಕನ ಕಿಂಡಿಯನ್ನು ಗಮನಿಸುವುದಕ್ಕಿಂತ ಅವರು ನೀಡಿದ ವಿಚಾರಗಳ ಮೂಲಕ ಜಗತನ್ನು ನೋಡಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಅಪ್ಪಾಜಿಗೌಡ, ಪ್ರಾಧ್ಯಾಪಕರಾದ ಎನ್‌.ಶೇಖರ್, ಡಾ.ಎನ್.ರಾಗಿಣಿ ವೇದಿಕೆ ಮೇಲಿದ್ದರು.

ಸಂಚಾಲಕಿ ಡಾ.ಎಚ್.ಪಿ.ಗೀತಾ ಸ್ವಾಗತಿಸಿದರು. ನಂತರ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ವಿಷಯಗಳನ್ನು ಮಂಡಿಸಿದರು. ರಾಜ್ಯದ ವಿವಿಧ ಕಾಲೇಜಿನಿಂದ 165 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT