ಪಾಂಡವಪುರ: ತಾಲ್ಲೂಕಿನ ಪುರಾಣ ಪ್ರಸಿದ್ಧ ಬೇಬಿಬೆಟ್ಟದ ದನಗಳ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಉತ್ತಮ 186 ಜೋಡಿ ಎತ್ತುಗಳಿಗೆ ಹಾಗೂ 19 ಹೋರಿಗಳಿಗೆ ಜಾತ್ರಾ ಮಹೋತ್ಸವ ಸಮಿತಿಯಿಂದ ಶುಕ್ರವಾರ ಬಹುಮಾನ ವಿತರಣೆ ಮಾಡಲಾಯಿತು.
ಫೆ.13ರಿಂದ ಒಂದು ವಾರ ಬೇಬಿಬೆಟ್ಟದ ದನಗಳ ಜಾತ್ರೆ ನಡೆದಿತ್ತು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನದಿಂದಾಗಿ ಜಾತ್ರೆಯ ಸಮಾರೋಪ ಸಮಾರಂಭವನ್ನು ಮುಂದೂಡಲಾಗಿತ್ತು. ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಿರಲಿಲ್ಲ.
ಜಾತ್ರಾಮಹೋತ್ಸವದಲ್ಲಿ ಆಯೋಜಿಸಿದ್ದ ವಾಲಿಬಾಲ್ ಟೂರ್ನಿ ಯಲ್ಲಿ ಪ್ರಥಮ ಸ್ಥಾನಪಡೆದ ಕೆ.ಆರ್.ಪೇಟೆ ತಂಡ ₹ 15 ಸಾವಿರ, ದ್ವಿತೀಯ ಸ್ಥಾನ ಪಡೆದ ರಾಗಿಮುದ್ದನಹಳ್ಳಿ ತಂಡಕ್ಕೆ ₹ 7,500, ತೃತೀಯ ಸ್ಥಾನಪಡೆದ ರಾಗಿಮುದ್ದನಹಳ್ಳಿಯ ಮತ್ತೊಂದು ತಂಡಕ್ಕೆ ₹ 5,000 ಬಹುಮಾನ ವಿತರಿಸಲಾಯಿತು.
ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳ ಮಾಲೀಕರಿಗೆ ಪ್ರೋತ್ಸಾಹಿ ಸಬೇಕು ಎನ್ನುವುದು ಪುಟ್ಟಣ್ಣಯ್ಯ ಅವರ ಆಶಯವಾಗಿತ್ತು. ಉತ್ತಮ ರಾಸುಗಳಿಗೆ ಬಹುಮಾನವನ್ನು ನೀಡುವ ಮೂಲಕ ಇದನ್ನು ಪುಟ್ಟಣ್ಣಯ್ಯ ಅವರ ಕುಟುಂಬಸ್ಥರು ಇದನ್ನು ಪ್ರೋತ್ಸಾಹಿ ಸುತ್ತಿರುವುದು ಉತ್ತಮ ಕಾರ್ಯ ಎಂದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬೇಬಿಬೆಟ್ಟದ ರಾಮಯೋಗಿಶ್ವರ ಮಠದ ಸದಾಶಿವಸ್ವಾಮೀಜಿ, ದೇಶಿತಳಿ, ಹಳ್ಳಿಕಾರ್ ತಳಿಗಳನ್ನು ರಕ್ಷಣೆ ಮಾಡಬೇಕೆಂಬ ಮಹದಾಸೆ ಹೊಂದಿದ್ದರು. ಉತ್ತಮ ರಾಸುಗಳ ಮಾಲೀಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೇಬಿಬೆಟ್ಟದ ಜಾತ್ರೆಯಲ್ಲಿ ರಾಸುಗಳಿಗೆ ಚಿನ್ನ, ಬೆಳ್ಳಿಯ ಪದಕವನ್ನು ಬಹುಮಾನವನ್ನಾಗಿ ನೀಡುತ್ತಿದ್ದರು ಎಂದರು.
ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಸುನೀತಾ ಪುಟ್ಟಣ್ಣಯ್ಯ, ಪುತ್ರಿಯರಾದ ಸ್ಮಿತಾ, ಅಕ್ಷತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಟಿ.ಗೋವಿಂದೇಗೌಡ, ಎ.ಎಲ್.ಕೆಂಪೂಗೌಡ, ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ, ಮುಖಂಡರಾದ ಆರ್.ಎ.ನಾಗಣ್ಣ, ಯ.ತಮ್ಮೇಗೌಡ, ಕೆನ್ನಾಳು ನಾಗರಾಜು, ಡಿ.ಹುಚ್ಚೇಗೌಡ, ಕೆ.ಎಸ್.ಪ್ರಕಾಶ್, ಸಿದ್ದಲಿಂಗದೇವರು, ಬೆಟ್ಟೇಗೌಡ, ಅಮೃತಿ ರಾಜಶೇಖರ್, ವಿಜಯ್ಕುಮಾರ್, ಸಿ.ಆರ್.ರಮೇಶ್, ಕುಬೇರ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಟರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.