ಗದಗ: ಕೆ.ಎಚ್.ಪಾಟೀಲ ಅವರ 94ನೇ ಜಯಂತ್ಯುತ್ಸವದ ಅಂಗವಾಗಿ ಸಚಿವ ಎಚ್.ಕೆ ಪಾಟೀಲ ಅವರು ಶುಕ್ರವಾರ ನಗರದಲ್ಲಿ 14ಕ್ಕೂ ಹೆಚ್ಚು ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬಿಂಕದಕಟ್ಟಿಯಲ್ಲಿ ನೂತನ ಯಾತ್ರಿ ನಿವಾಸವನ್ನು ಅವರು ಉದ್ಘಾಟಿಸಿದರು. ₹3 ಕೋಟಿ ಅನುದಾನದಲ್ಲಿ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ನಗರದ ರಾಜೀವ್ ಗಾಂಧಿ ನಗರದಲ್ಲಿ ₹1.26 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈಜುಕೊಳವನ್ನು ಅವರು ಉದ್ಘಾಟಿಸಿದರು.
ಇದಕ್ಕೂ ಮುನ್ನ ಮುಳಗುಂದ ನಾಕಾದಲ್ಲಿ ನಿರ್ಮಾಣವಾದ ಸೆರಬ್ರಲ್ ಪಾಲ್ಸಿ -ಪುನಶ್ಚೇತನ ಹಾಗೂ ಡೇ ಕೇರ್ ಸೆಂಟರ್ ಹಾಗೂ ರಾಜೀವ ಗಾಂಧಿ ನಗರದಲ್ಲಿ ₹28 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಹಾಗೂ ಈಶ್ವರ ಬಡಾವಣೆಯಲ್ಲಿ ₹17 ಲಕ್ಷ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ವಿವಿಧ ಸಮುದಾಯ ಭವನಕ್ಕೆ ಭೂಮಿಪೂಜೆ: ಸಚಿವ ಎಚ್.ಕೆ. ಪಾಟೀಲರು ತಾಲ್ಲೂಕಿನ ಹುಲಕೋಟಿಯಲ್ಲಿ ನೂತನ ಗ್ರಾಮ ಪಂಚಾಯಿತಿ ಹಾಗೂ ಹಾಲಿನ ಡೈರಿ ಕಟ್ಟಡದ ಭೂಮಿಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಅವರು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನದಡಿ 70 ಮಂದಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಿದರು.
ಹಿರೇಹಂದಿಗೋಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ, ಕಲ್ಮೇಶ್ವರ ದೇವಸ್ಥಾನ ಸಮುದಾಯ ಭವನ, ಗಾಳಿ ಮಹಾದೇವಿ ದೇವಸ್ಥಾನದ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿದರು.
ಗದಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಸದಸ್ಯ ಸಿದ್ದು ಪಾಟೀಲ, ಗದಗ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎ.ಆರ್.ನದಾಫ ಈ ಸಂದರ್ಭದಲ್ಲಿ ಹಾಜರಿದ್ದರು.
ಗದಗ ನಗರಸಭೆ ಸದಸ್ಯ ಎಂ.ಸಿ.ಶೇಖ್, ರುದ್ರಮ್ಮ ಕೆರಕಲಮಟ್ಟಿ, ಕಮಲಾ ಹಾದಿಮನಿ, ಹುಲಕೋಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಸವ್ವ ಪವಾಡೆಣ್ಣವರ, ಉಪಾಧ್ಯಕ್ಷೆ ಮಲ್ಲವ್ವ ಯಲಿಶೆಟ್ಟರ, ಮಾಜಿ ಶಾಸಕ ಡಿ.ಆರ್.ಪಾಟೀಲ ಮತ್ತು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.