ಕುಷ್ಟಗಿ (ಕೊಪ್ಪಳ ಜಿಲ್ಲೆ): ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಬಾಯಾರಿದ ಪ್ರಾಣಿ, ಪಕ್ಷಿಗಳ ದಾಹವನ್ನು ನೀಗಿಸುವ ಕೆಲಸವನ್ನು ಪಟ್ಟಣದ ದ್ವಾರಕಾಮಾಯಿ ಶಿರಡಿ ಸೇವಾ ಟ್ರಸ್ಟ್ ಮತ್ತು ಗೆಳೆಯರ ಬಳಗದವರು ಮಾಡುತ್ತಿದ್ದಾರೆ.
ಕಂದಕೂರು ರಸ್ತೆಯಲ್ಲಿರುವ ಎರೆಹಳ್ಳದಲ್ಲಿ ಹತ್ತಕ್ಕೂ ಹೆಚ್ಚು ಸಿಮೆಂಟ್ ತೊಟ್ಟಿಗಳನ್ನು ಇಟ್ಟು, ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ಇದರ ವೆಚ್ಚವನ್ನು ಟ್ರಸ್ಟ್ ಭರಿಸುತ್ತಿದೆ.
‘ಕಾಡಿನಲ್ಲಿ ಎಲ್ಲಿಯೂ ಜಲಮೂಲಗಳು ಇಲ್ಲ. ಹೀಗಾಗಿ ಪ್ರಾಣಿ, ಪಕ್ಷಿಗಳು, ಜಾನುವಾರುಗಳು ನೀರಿಲ್ಲದೆ ತೊಂದರೆ ಅನುಭವಿಸುತ್ತಿವೆ. ನೀರಿಲ್ಲದೆ ಪ್ರಾಣಿಗಳು ಮೃತಪಟ್ಟಿರುವ ಘಟನೆಗಳೂ ನಡೆದಿವೆ. ಹೀಗಾಗಿ ಸಿಮೆಂಟ್ ತೊಟ್ಟಿಗಳನ್ನು ಅಳವಡಿಸಿ ನೀರಿನ ವ್ಯವಸ್ಥೆ ಮಾಡಿದ್ದೇವೆ’ ಎನ್ನುತ್ತಾರೆ ಟ್ರಸ್ಟಿನ ಪ್ರತಿನಿಧಿಗಳು.
ಆದರೆ ದುಷ್ಕರ್ಮಿಗಳು ಸಿಮೆಂಟ್ ತೊಟ್ಟಿಗಳನ್ನು ಎತ್ತಿಕೊಂಡು ಹೋಗುವುದು ತಲೆನೋವಾಗಿದೆ.
ಹಗಲಿನಲ್ಲಿ ಜಾನುವಾರುಗಳು, ಪಕ್ಷಿಗಳು ದಾಹ ನೀಗಿಸಿಕೊಳ್ಳುತ್ತವೆ. ರಾತ್ರಿ ವೇಳೆ ತೋಳ, ನರಿಗಳಂತಹ ಕಾಡುಪ್ರಾಣಿಗಳು ಬಂದು ನೀರು ಕುಡಿಯುತ್ತವೆ.
‘ಬೇಸಿಗೆಯಲ್ಲಿ ಪ್ರಾಣಿಗಳು ನೀರಿಲ್ಲದೆ ಪರಿತಪಿಸುತ್ತವೆ. ಆದ್ದರಿಂದ ಎಲ್ಲೆಲ್ಲಿ ಅಗತ್ಯವಿದೆಯೂ ಅಲ್ಲಿ ಇಂತಹ ಕೆಲಸ ಆಗಬೇಕು. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂಬ ಮನೋಭಾವ ಬಿಡಬೇಕು ಎನ್ನುವುದು ಟ್ರಸ್ಟ್ನವರ ಅಭಿಪ್ರಾಯ.
ಇಂತಹ ಮಾದರಿ ಕೆಲಸದಲ್ಲಿ ಟ್ರಸ್ಟ್ನ ಬಸವರಾಜ ರೆಡ್ಡಿ, ಪ್ರವೀಣ್, ಕಲಾಲ, ರಾಮು ಬನಿಗೋಳ, ಬಸವರಾಜ ಹಡಪದ, ಕೃಷ್ಣ ಕಂದಕೂರ, ಬಾನು ರೆಡ್ಡಿ, ಪ್ರಶಾಂತ, ಹನುಮಂತ ತೊಡಗಿಸಿಕೊಂಡಿದ್ದಾರೆ.