ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1560 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ಜಿ2ಪ್ಲಸ್‌ ಮಾದರಿಯಲ್ಲಿ ಆಶ್ರಯಮನೆಗಳ ನಿರ್ಮಾಣ: ಕಾಶಪ್ಪನವರ
Last Updated 20 ಮಾರ್ಚ್ 2018, 5:58 IST
ಅಕ್ಷರ ಗಾತ್ರ

ಇಳಕಲ್: ‘ಸೂರು ಇಲ್ಲದ ನಗರದ ಎಲ್ಲ ಸಮುದಾಯಗಳ -ಬಡವರಿಗೆ ಜಿ2ಪ್ಲಸ್‌ ಮಾದರಿಯಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮೊದಲ ಹಂತದಲ್ಲಿ 1560 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಕಂದಗಲ್ ರಸ್ತೆಯಲ್ಲಿ ಆಶ್ರಯ ಬಡಾವಣೆಗಾಗಿ ಖರೀದಿಸಲಾದ 42 ಎಕರೆ ಜಮೀನಿನಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ಹಾಗೂ ನಗರಸಭೆ ಆಯೋಜಿಸಿದ ಸಮಾರಂಭದಲ್ಲಿ ಹಕ್ಕುಪತ್ರಗಳ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದಲ್ಲಿ 59 ಜಾತಿ ಸಮುದಾಯಗಳಿವೆ. ಈ ಎಲ್ಲ ಸಮುದಾಯಗಳ ಅಧ್ಯಕ್ಷರು, ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ವಸಿತರನ್ನು ಗುರುತಿಸಿ ಮನೆಗಳನ್ನು ಹಂಚಿದ್ದೇವೆ. ಫಲಾನುಭವಿಗಳು ದಾಖಲೆಗಳನ್ನು ಕೊಟ್ಟು ಹಕ್ಕುಪತ್ರಗಳನ್ನು ತೆಗೆದುಕೊಂಡು ಹೊಗಬೇಕು. ಯಾರಿಗೂ ₹ 1 ಸಹ ಲಂಚ ನೀಡಬಾರದು. ಮುಂಬರುವ ದಿನಗಳಲ್ಲಿ ಇಲ್ಲಿ ಮನೆಗಳನ್ನು ಕಟ್ಟಿ ಕೊಡುವುದಾಗಿ ಭರವಸೆ ನೀಡಿದರು.

‘ಇಲ್ಲಿ ಜಿ+2 ಮಾದರಿಯಲ್ಲಿ 4500 ಮನೆಗಳನ್ನು ನಿರ್ಮಿಸಲಾಗುತ್ತಿದೆ. ನಗರದ ಇತಿಹಾಸದಲ್ಲಿ ಇಷ್ಟೊಂದು ಮನೆಗಳನ್ನು ನಿರ್ಮಾಣವಾಗುತ್ತಿರುವುದು ಇದೇ ಮೊದಲು. ನಗರದ ಬಡವರಿಗೆ ನಾನು ನೀಡಿದ ವಾಗ್ದಾನವನ್ನು ಈಡೇರಿಸಿದ್ದೇನೆ. ಒಂದೇ ಕಡೆಯಲ್ಲಿ 42 ಏಕರೆ ಜಮೀನು ಖರೀದಿಸುವುದು ಸುಲಭವಲ್ಲ. ಸಾಕಷ್ಟು ಪ್ರಯತ್ನದ ನಂತರ ಇದು ಸಾಧ್ಯವಾಗಿದೆ. ಎಕರೆಗೆ ₹ 22 ಲಕ್ಷದಂತೆ ಒಟ್ಟು ₹ 9.40 ಕೋಟಿ ವೆಚ್ಚದಲ್ಲಿ ಜಮೀನು ಖರೀದಿಸಿದ್ದೇವೆ. ನಾನು ನಿಮ್ಮ ಕೆಲಸ ಮಾಡಿಕೊಟ್ಟು ಕೂಲಿಗಾಗಿ ನಿಮ್ಮ ಮುಂದೆ ಬರಲಿದ್ದೇನೆ. ನೀವು ಮತ್ತೊಮ್ಮೆ ನನಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

‘ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ಹಿಂದಿನ ಆಶ್ರಯ ಕಾಲೋನಿಯಲ್ಲಿ 188 ಮನೆಗಳನ್ನು ಕಟ್ಟಲು ಪ್ರತಿ ಮನೆಗೆ ₹ 3.40 ಲಕ್ಷ ಹಾಗೂ ಈ 42 ಎಕರೆ ಜಮೀನು ಖರೀದಿಗೆ ಅನುದಾನ ಒದಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಎಂ.ಕೃಷ್ಣಪ್ಪ ಅವರನ್ನು ಅಭಿನಂದಿಸುತ್ತೇನೆ. ನೀರಾವರಿ ಯೋಜನೆಗಳು ಸೇರಿದಂತೆ ಮತಕ್ಷೇತ್ರದ ಅಭಿವೃದ್ಧಿಗಾಗಿ ₹ 4000 ಕೋಟಿ ಅನುದಾನ ತಂದಿದ್ದೇನೆ. ನನ್ನ ವಿರುದ್ದ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿಸಿದರೂ ಇಲ್ಲಿ ಗೆಲ್ಲುವುದು ನಾನೇ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ನಗರಸಭೆ ಅಧ್ಯಕ್ಷೆ ಖುರ್ಷಿದಾಬೇಗಂ ಗದ್ವಾಲ, ಉಪಾಧ್ಯಕ್ಷ ಮಹಾಂತೇಶ ಹನಮನಾಳ, ಇಳಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಹಬೂಬಸಾಬ ಹಳ್ಳಿ, ಶಾಂತಕುಮಾರ ಸುರಪುರ, ಕೆಎಚ್‌ಡಿಸಿ ನಿರ್ದೇಶಕ ಅರುಣ ಬಿಜ್ಜಲ, ಪ್ರಶಾಂತ ಹಂಚಾಟೆ, ರಜಾಕ್ ತಟಗಾರ, ಮಹ್ಮದ್‌ಶರೀಫ್‌, ಕಮಲಾಕರರಾವ್ ದೇಶಪಾಂಡೆ, ಸತೀಶ ಸಪ್ಪರದ, ಮಹಾಂತೇಶ ಚಟ್ಟೇರ, ನಗರಸಭೆ ಸದಸ್ಯ ದೇವಾನಂದ ಕಾಶಪ್ಪನವರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಯಮನೂರ ಚಲವಾದಿ, ಸ್ಥಾಯಿ ಸಮೀತಿ ಚೇರಮನ್ ಮಲ್ಲೇಶ ಮುದಗಲ್, ಬಾಬುಲಾಲ್ ಶಿವನಗುತ್ತಿ, ನಿಯಾಜ ಅಹಮದ್, ಶ್ರೀಕಾಂತಸಾ ರಾಜೋಳ್ಳಿ, ದುರ್ಗಪ್ಪ ಕನ್ನೂರ ಇದ್ದರು.
**
ಇಳಕಲ್‌ ನಗರ ಸೇರಿದಂತೆ ಹುನಗುಂದ ಮತಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡುವ ಹಾದಿಯಲ್ಲಿ ಸಾಕಷ್ಟು ಕ್ರಮಿಸಿದ್ದೇನೆ.
- ವಿಜಯಾನಂದ ಕಾಶಪ್ಪನವರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT