ಕಲಬುರ್ಗಿ: ’ಕನ್ನಡ ಭಾಷೆ, ಕಲೆ, ಸಂಸ್ಕೃತಿ ನಶಿಸಿ ಹೋಗದಂತೆ ಹಲವಾರು ಜನಪದ ಕಲಾವಿದರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಇಸ್ಮಾಯಿಲ್ ಸಾಬ್ ವಾಗ್ದರಿ ಹೇಳಿದರು.
ಇಲ್ಲಿನ ಸಾಂದಿಪನಿ ಶಾಲೆಯಲ್ಲಿ ಸಿದ್ದಾರ್ಥ ಕಲಾ ಮತ್ತು ಸಾಹಿತ್ಯ ಸೇವಾ ಸಂಘದ ವತಿಯಿಂದ ಈಚೆಗೆ ನಡೆದ ದಾಸವಾಣಿ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು
‘ಕಲಾವಿದರು ತಮ್ಮ ಬದುಕನ್ನು ಕಲೆಗೆ ಮೀಸಲಿಟ್ಟು ಸಾರ್ಥಕ ಜೀವನ ನಡೆಸುತ್ತಿದ್ದಾರೆ. ಅಂತಹ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಜನಪದ ಕಲೆಗಳನ್ನು ಬೆಳೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ಕಲಾವಿದರಿಗೆ ಉತ್ತೇಜನ ನೀಡಬೇಕು’ ಎಂದು ಸಲಹೆ ನೀಡಿದರು.
ಚನ್ನವೀರಪ್ಪ ಗುಡ್ಡ ಮಾತನಾಡಿ, ‘ಮಕ್ಕಳಿಗೆ ಸಂಗೀತದ ಸಂಸ್ಕಾರ ಕೊಡುವುದು ಮುಖ್ಯ. ಕಲೆ ಯಾವುದೇ ಇರಲಿ ಅದರಿಂದ ಮನಸು ವಿಕಸನಗೊಳ್ಳುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ಸಂಗೀತ, ಸಾಹಿತ್ಯ ಕೇಳುವುದರಿಂದ ಮನಸ್ಸು ಹಗುರವೆನಿಸುತ್ತದೆ’ ಎಂದು
ಹೇಳಿದರು.
ಸುಹಾಸಿನಿ ಫೂಲಾರಿ, ಬಾಬುರಾವ ಕೋಬಾಳ, ಚೇತನ.ಬಿ.ಕೆ., ಅಂಬುಬಾಯಿ ಸೋನಾರ, ಸಂಗೀತ ನಾರಾಯಣ ಪೇಠ, ಧನಶ್ರೀ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ನಂದಾರಾಣಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಶ್ರೀಮಂತ ಚಿಂಚನಸೂರು, ಉಷಾ ಆರ್.ಕುಲಕರ್ಣಿ ಇದ್ದರು.