ವಿಜಯಪುರ: ಒಂದೆಡೆ ವಿಧಾನಸಭೆ ಚುನಾವಣೆಯ ಕಾವು, ಮತ್ತೊಂದೆಡೆ ಸೂರ್ಯನ ಪ್ರತಾಪ. ಹೆಚ್ಚಿದ ಬಿರು ಬಿಸಿಲಿನ ಧಗೆ. ಇವೆಲ್ಲದರ ಪರಿಣಾಮ ಎಳನೀರು ಸೇರಿದಂತೆ ತಂಪು ಪಾನೀಯಗಳಿಗೆ ಬಲು ಬೇಡಿಕೆ.
ಬೀಸಿಲು ನಾಡು ವಿಜಯಪುರ ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೆ ಸೂರ್ಯನ ರೌದ್ರಾವತಾರಕ್ಕೆ ಜನರು ಸುಸ್ತಾಗಿದ್ದಾರೆ. ಧಗೆಯಿಂದ ತುಸು ನೆಮ್ಮದಿ ಕಂಡುಕೊಳ್ಳಲು ಆರೋಗ್ಯಕ್ಕೆ ಉತ್ತಮ ಔಷಧಿ ಎಂದು ಗುರುತಿಸಿಕೊಂಡಿರುವ ಎಳನೀರು ಸೇವನೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನತೆ ಮುಗಿ ಬಿದ್ದಿದ್ದರಿಂದ ಬಹಳಷ್ಟು ಬೇಡಿಕೆ ಬಂದಿದೆ.
ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣ, ಕೋರ್ಟ್, ಇಬ್ರಾಹಿಂಪುರ ಗೇಟ್, ಗಣೇಶ ನಗರ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ಬಿ.ಎಲ್.ಡಿ.ಇ ಆಸ್ಪತ್ರೆ, ಆಶ್ರಮ, ಗೋಲಗುಮ್ಮಟ ಸೇರಿದಂತೆ ಬಹುತೇಕ ಕಡೆ ಎಳನೀರು ವ್ಯಾಪಾರ ಬಲು ಜೋರು. ಜೊತೆಗೆ ಕಬ್ಬಿನ ಹಾಲು, ಲಸ್ಸಿ, ಮಜ್ಜಿಗೆ, ಹಣ್ಣಿನ ಜೂಸ್ಗೂ ಬೇಡಿಕೆ ಇದೆ.
‘ಹಲವು ವರ್ಷಗಳಿಂದ ಎಳನೀರು ಪ್ಯಾಪಾರ ಮಾಡುತ್ತಿದ್ದೇವೆ. ಸಾಮಾನ್ಯ ದಿನಗಳಲ್ಲಿ ಜನ್ರು ಎಳನೀರು ಕುಡಿದರೂ ಅಷ್ಟೊಂದು ವ್ಯಾಪಾರ ಆಗುವುದಿಲ್ಲ. ಬೇಸಿಗೆ ಬಂತೆಂದರೆ ಸಾಕು ಎಳನೀರಿಗೆ ಹೆಚ್ಚಿನ ಪ್ರಮಾಣದ ಬೇಡಿಕೆ ಬರುತ್ತದೆ. ಸದ್ಯ ನಗರದಲ್ಲಿರುವ ನಮ್ಮ 12 ಅಂಗಡಿಗಳಲ್ಲಿ ಎರಡ್ಮೂರು ದಿನಗಳಲ್ಲಿ ಏನಿಲ್ಲಂದ್ರೂ 10 ಸಾವಿರ ಎಳನೀರು ಮಾರಾಟವಾಗುತ್ತವೆ. ಇದು ಸಾಮಾನ್ಯ ದಿನಗಳಿಂತ ನಾಲ್ಕಾರು ಪಟ್ಟು ಹೆಚ್ಚು ವ್ಯಾಪಾರ’ ಎಂದು ಎಳೆನೀರು ವ್ಯಾಪಾರಿ ಅಶೀಫ್ ಮುಶ್ರೀಫ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲೆಯಲ್ಲಿ ಎಳನೀರು ದೊರೆಯುವುದಿಲ್ಲ. ಹೀಗಾಗಿ ಮೈಸೂರು, ಮಂಡ್ಯ, ಮದ್ದೂರು ಸೇರಿದಂತೆ ವಿವಿಧಡೆಯಿಂದ ತರಿಸುತ್ತೇವೆ. ಸಾಮಾನ್ಯ ದಿನಗಳಲ್ಲಿ₹14 ರಿಂದ ₹15ಗೆ ಸಿಗುತ್ತವೆ. ನಾವು₹ 20 ರಿಂದ ₹25 ಮಾರಾಟ ಮಾಡುತ್ತೇವೆ. ಸದ್ಯ ಬೇಸಿಗೆ ಇರುವುದರಿಂದ ₹18 ರಿಂದ ₹20 ಬೆಲೆ ಹೆಚ್ಚಳಗೊಂಡಿದೆ. ಹೀಗಾಗಿ ನಾವು ಕೂಡ ₹ 30 ರಿಂದ 35ಗೆ ಮಾರಾಟ ಮಾಡುತ್ತಿದ್ದೇವೆ. ದರ ಹೆಚ್ಚಳಗೊಂಡರೂ ಬೇಡಿಕೆ ಕಡಿಮೆಯಾಗಿಲ್ಲ’ ಎಂದು ಅಶೀಫ್ ಹೇಳುತ್ತಾರೆ.
‘ಎಳನೀರು ಆರೋಗ್ಯಕ್ಕೆ ಹಿತಕರ. ಇದನ್ನು ಕುಡಿಯುದರಿಂದ ದೇಹದಲ್ಲಿ ಉಂಟಾಗುವ ಅತಿಯಾದ ಉಷ್ಣತೆಯನ್ನು ತಡೆಯುತ್ತದೆ. ಸಾಮಾನ್ಯವಾಗಿ ಆಗಾಗ ಸೇವನೆ ಮಾಡುತ್ತೇವೆ. ಆದರೆ, ಬೇಸಿಗೆಯಲ್ಲಿ ನಿತ್ಯ ಒಂದನ್ನಾದರೂ ಸೇವಿಸುವ ಮೂಲಕ ಬಿಸಿಲಿನಿಂದ ರಕ್ಷಿಸಿಕೊಳ್ಳುತ್ತೇವೆ ಎನ್ನುತ್ತಾರೆ ನಗರ ನಿವಾಸಿ ಆನಂದ ಹದರಿ. ಬಿರು ಬಿಸಿಲ ಬೇಗೆಗೆ ಬಾಯಾರಿಕೆ ತಣಿಸಿ, ದೇಹಕ್ಕೆ ತಂಪು ನೀಡುವ ಎಳನೀರು ಕೇವಲ ಪಾನೀಯವಲ್ಲ, ಇದೊಂದು ಆರೋಗ್ಯ ವೃದ್ಧಿಸುವ ಔಷಧಿ. ದೇಹದಲ್ಲಿ ಗ್ಲುಕೋಸ್ ಕೊರತೆ
ಯಾದಾಗ ಎಳನೀರು ಸೇವನೆ ಮಾಡುವುದು ಉತ್ತಮ ಎಂದು ವಿದ್ಯಾರ್ಥಿ ಸಂತೋಷ ಬಿರಾದಾರ ಹೇಳಿದರು.
**
ಬಿಸಿಲಿನ ತಾಪ ಹೆಚ್ಚಿದ್ದರಿಂದ ಎಳನೀರು ದರ ತುಸು ಹೆಚ್ಚಾಗಿದೆ. ಬೇಡಿಕೆ ಕಡಿಮೆಯಾಗಿಲ್ಲ. 2–3 ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಎಳನೀರು ಮಾರಾಟವಾಗುತ್ತಿವೆ
- ಆಶೀಫ್ ಮುಶ್ರೀಫ್, ಎಳನೀರು ವ್ಯಾಪಾರಿ
**
₹ 30–35 ಎಳನೀರು ಬೆಲೆ
ಆರೋಗ್ಯಕರ ಪಾನೀಯ: ವೈದ್ಯರ ಸಲಹೆ
ದೇಹದ ಉಷ್ಣತೆ ಕಾಪಾಡಿಕೊಳ್ಳಲು ಸಹಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.