ತುಮಕೂರು: ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗಬಹುದು. ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸಲು ಸಿದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಸೂಚಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸೋಮವಾರ ಮಾದರಿ ನೀತಿ ಸಂಹಿತೆ ಸಮರ್ಪಕ ಅನುಷ್ಠಾನ ಸಂಬಂಧ ನೋಡಲ್ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹ ಶೀಲ್ದಾರ್, ಪೊಲೀಸ್ ಇಲಾಖೆ ಅಧಿಕಾರಿ ಗಳು ಹಾಗೂ ಸಿಬ್ಬಂದಿಗೆ ಹಮ್ಮಿ ಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಚುನಾವಣೆ ಘೋಷಣೆಯಾಗಿದೆ ಎಂದು ತಿಳಿದು ಜಿಲ್ಲಾಡಳಿತವು ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಈ ಚುನಾವಣೆಯಲ್ಲಿ ಅಧಿಕಾರಿಗಳು ಹಲವು ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಧಿಕಾರಿ ಹಾಗೂ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
’ಜನರಿಗೆ ಗೊಂದಲ ಆಗದಂತೆ ಚುನಾವಣೆ ನಡೆಸಬೇಕು ಎಂದು ಚುನಾ ವಣಾ ಆಯೋಗ ನಿರ್ದೇಶನ ನೀಡಿದೆ. ವಿವಿ ಪ್ಯಾಟ್ (ಮತದಾನ ಖಾತ್ರಿ ಯಂತ್ರ) ಹೊಸದಾಗಿ ಪರಿಚಯಿಸಲಾಗುತ್ತಿದೆ. ಇದರ ನೆರವಿನಿಂದ ಮತದಾರ ತಾನು ಯಾರಿಗೆ ಮತ ಚಲಾಯಿಸಿದ್ದೇನೆ ಎಂಬ ಮಾಹಿತಿ ತಿಳಿದುಕೊಳ್ಳಬಹುದು. ವಿವಿ ಪ್ಯಾಟ್ ಯಂತ್ರದ ಬಳಕೆಯ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಲಾಗುತ್ತಿದೆ’ ಎಂದರು.
‘ಚುನಾವಣೆಯನ್ನು ಪಾರ ದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ ತುಮಕೂರು ಮೂಲದ ಅಧಿಕಾರಿಗಳನ್ನು ಸರ್ಕಾರ ಈಗಾಗಲೇ ವರ್ಗಾವಣೆ ಮಾಡತೊಡಗಿದೆ. 5 ವರ್ಷಗಳಿಂದ ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ವರ್ಗಾವಣೆಗೂ ಶಿಫಾರಸು ಮಾಡುವ ಸಲಹೆಯನ್ನು ಸರ್ಕಾರ ನನಗೆ ನೀಡಿದೆ’ ಎಂದು ಹೇಳಿದರು.
ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ಪೋಸ್ಟರ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಲು ಅವಕಾಶ ಇಲ್ಲ. ಕಾಮಗಾರಿಗೆ ಟೆಂಡರ್ ಕರೆಯುವಂತಿಲ್ಲ. ಕಾಮಗಾರಿ ಕೈಗೊಳ್ಳಲು ಕಾರ್ಯಾದೇಶ ನೀಡುವಂತಿಲ್ಲ. ಕಾಮಗಾರಿ ಈಗಾಗಲೇ ಕೈಗೆತ್ತಿಕೊಂಡಿದ್ದರೆ ಮುಂದುವರಿ ಸಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ’ನಿಯೋಜಿತ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸುವುದು ಸೇರಿದಂತೆ ಎಲ್ಲ ಜವಾಬ್ದಾರಿ ಹೊಂದಿರಬೇಕು. ಯಾವುದೇ ಲೋಪ ವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಂದೇಹಗಳು ಇದ್ದರೆ ತರಬೇತುದಾರರಿಂದ ಪರಿಹರಿಸಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.
ತರಬೇತುದಾರ ಎಸ್.ಪಿ. ರಾಜಣ್ಣ ಮಾತನಾಡಿ, ’ಚುನಾ ವಣಾ ಪ್ರಕ್ರಿಯೆ ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ನಡೆಯ ಬೇಕಾದರೆ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಮತದಾರ ನಿರ್ಭೀತಿಯಿಂದ ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಮತದಾನದಿಂದ ವಂಚಿತವಾಗದಂತೆ ಎಚ್ಚರಿಕೆವಹಿಸಬೇಕು ಎಂದರು.
ಈ ಕಾರ್ಯಾಗಾರ ಜಿಲ್ಲಾ ಮಟ್ಟದ ತರಬೇತಿ ಆಗಿದೆ. ಮುಂದಿನ ಹಂತದಲ್ಲಿ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಾಗಾರ ನಡೆಸಲಾಗುವುದು. ತರಬೇತಿಯಲ್ಲಿ ತಿಳಿಸುವ ಸೂಚನೆಗಳನ್ನು ಸಿಬ್ಬಂದಿ ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದರು.
ರಾಜಕೀಯ ಪಕ್ಷಗಳು, ಅಭ್ಯರ್ಥಿ ಗಳು, ಅಧಿಕಾರಿಗಳು ಮಾದರಿ ನೀತಿ ಸಂಹಿತೆಯ ನಿಯಮಾವಳಿಗಳನ್ನು ಒಪ್ಪಿ ಮುಕ್ತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು. ಅವ್ಯವಹಾರ, ಮತದಾರರಿಗೆ ಆಮಿಷ, ಲಿಂಗ, ಧರ್ಮ, ಭಾಷೆಯ ಹೆಸರಿನಲ್ಲಿ ಮತಯಾಚನೆ, ಮತದಾರರಿಗೆ ಗಾಬರಿ ಉಂಟು ಮಾಡುವುದು ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತೆ ಎಂದು ವಿವರಿಸಿದರು.
ಚುನಾವಣಾ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸಿಕೊಳ್ಳುವವರ ಮೇಲೆ ನಿಗಾವಹಿ ಸಬೇಕು. ಚುನಾವಣೆ ಮೇಲೆ ಜನರಿಗೆ ಅಪನಂಬಿಕೆ ಬಾರದಂತೆ ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಚುನಾವಣೆಗೆ ಸಂಬಂಧಿಸಿದ ಸಂದೇಹಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಡಾ. ಗೋಪಾಲ್ ಅವರಲ್ಲಿ ಪರಿಹರಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.