ಪುರಾಣದ ದ್ರೌಪದಿ ವಸ್ತ್ರಾಪಹರಣ, ರಾಮನಿಂದ ಪರಿತ್ಯಕ್ತಳಾದ ಸೀತೆ, ದುಷ್ಯಂತನ ಮರೆಗುಳಿತನದ ಸೋಗಿಗೆ ಬಲಿಯಾಗಿ ಕಾಡಿನಲ್ಲಿ ಒಂಟಿ ಜೀವನ ನಡೆಸಿದ ಶಕುಂತಲಾ, ತೀರಾ ಇತ್ತೀಚಿನ ಇಡೀ ದೇಶದಲ್ಲಿ ತಲ್ಲಣ ಮೂಡಿಸಿದ್ದ ನಿರ್ಭಯಾ ಪ್ರಕರಣ, ಈ ಎಲ್ಲ ಪಾತ್ರಗಳಲ್ಲಿ ಹೆಣ್ಣು ಅನುಭವಿಸಿದ ಮಾನಸಿಕ ತುಮುಲಗಳನ್ನು ಕಲಾವಿದೆಯರು ನೈಜವಾಗಿ ಅಭಿವ್ಯಕ್ತಿಸಿದರು. ಪುರಾಣದಿಂದ ನಡೆಯುತ್ತಿರುವ ಮಹಿಳೆಯರ ಮೇಲಿನ ಅಧಿಕಾರ ಚಲಾವಣೆ, ದೌರ್ಜನ್ಯ ಇಂದಿಗೂ ಬದಲಾಗಿಲ್ಲ. ಅಂದಿನ ದೌರ್ಜನ್ಯಗಳು ಆದರ್ಶದ ನೆರಳಿನಲ್ಲಿ ನಡೆಯುತ್ತಿದ್ದ ಸಾತ್ವಿಕ ರೂಪದಲ್ಲಿದ್ದರೆ, ಇಂದು ಅವೇ ಕ್ರೌರ್ಯದ ಮುಖವಾಡ ಕಟ್ಟಿಕೊಂಡು ಮಹಿಳೆಯರ ಬದುಕನ್ನು ಕುಗ್ಗಿಸಲು ಹವಣಿಸುತ್ತಿವೆ ಎಂಬ ವಿಷಾದ ನೋಡುಗರಲ್ಲಿ ಕಾಡಿದರೂ, ಹೆಣ್ಣಿನ ಒಗ್ಗಟ್ಟು ಈ ಚಿತ್ರಣವನ್ನು ಬದಲಿಸಬಲ್ಲದು ಎಂಬ ಆಶಾಭಾವದೊಂದಿಗೆ ನಾಟಕ ಮುಕ್ತಾಯಗೊಂಡಿತು. ಎಚ್.ಎಸ್. ವೆಂಕಟೇಶಮೂರ್ತಿ ರಚನೆಯ ನಾಟಕಕ್ಕೆ ಶ್ರೀಪಾದ ಭಟ್ಟ ನಿರ್ದೇಶನ, ಚಂದ್ರು ಉಡುಪಿ ಸಹಕಾರ ನೀಡಿದ್ದರು.