ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಸರ್ಕಾರಿ ನೌಕರರ ವಿರುದ್ಧ ದೂರು ದಾಖಲಾದರೂ ತಕ್ಷಣಕ್ಕೆ ಜಾರಿಯಾಗುವಂತೆ ಅವರನ್ನು ಬಂಧಿಸಕೂಡದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದೆ.
ಈ ಕಾಯ್ದೆಯ ಅಡಿ ಯಾವುದೇ ಸರ್ಕಾರಿ ನೌಕರರನ್ನು ಬಂಧಿಸುವ ಮೊದಲು ಪ್ರಕರಣದ ಬಗ್ಗೆ ಡಿವೈಎಸ್ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸುವುದು ಕಡ್ಡಾಯ ಎಂಬ ಷರತ್ತು ವಿಧಿಸಿದೆ.
ಸರ್ಕಾರಿ ನೌಕರರ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯ ದುರ್ಬಳಕೆ ಹೆಚ್ಚಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಆದರ್ಶ್ ಗೋಯೆಲ್ ಮತ್ತು ಯು.ಯು. ಲಲಿತ್ ಅವರ ಪೀಠ ಮಂಗಳವಾರ ಈ ಮಹತ್ವದ ಆದೇಶ ಹೊರಡಿಸಿದೆ.
ನಿರ್ದೇಶನ: ಈ ಕಾಯ್ದೆ ಅಡಿ ಸರ್ಕಾರಿ ನೌಕರರನ್ನು ಬಂಧಿಸುವ ಮುನ್ನ ಮತ್ತು ನಂತರ ಪಾಲಿಸಬೇಕಾದ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ಕೆಲವು ನಿರ್ದೇಶನ ನೀಡಿದೆ. ಕಾಯ್ದೆ ಅಡಿ ಸರ್ಕಾರಿ ನೌಕರ ವಿರುದ್ಧ ದೂರು ದಾಖಲಾದರೆ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸುವಂತಿಲ್ಲ ಎಂದೂ ಪೀಠ ಹೇಳಿದೆ.