ಕುಳಗಟ್ಟೆ: ಯುಗಾದಿ ಹಬ್ಬದಂದು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವರ ಕಾರ್ಣೀಕ (ವಾರ್ಷಿಕ ಭವಿಷ್ಯ ವಾಣಿ) ನುಡಿಯುವ ಕಾರ್ಯಕ್ರಮ ಸೋಮವಾರ ರಾತ್ರಿ ಸಂಭ್ರಮದಿಂದ ನಡೆಯಿತು.
ಭಾನುವಾರ ಮಧ್ಯಾಹ್ನ ಗ್ರಾಮದ ಶ್ರೀ ಆಂಜನೇಯ, ಬೀರಲಿಂಗೇಶ್ವರ, ಶ್ರೀರಾಮಪ್ಪ, ಕರಿಯಮ್ಮ, ಹನುಮಪ್ಪ ದೇವರ ಉತ್ಸವ ಮೂರ್ತಿಗಳನ್ನು ಹೊಸಹಳ್ಳಿಯ ತುಂಗಭದ್ರಾ ನದಿಗೆ ಕರೆದುಕೊಂಡು ಹೋಗಿ, ಪವಿತ್ರ ಗಂಗಾ ಪೂಜೆ ಮಾಡಲಾಯಿತು.
ಗ್ರಾಮದಲ್ಲಿ ಚಂದ್ರದರ್ಶನ ನಂತರ ಕಾರ್ಣೀಕ ಹೇಳುವುದು ಸಂಪ್ರದಾಯ. ಭಾನುವಾರ ಚಂದ್ರದರ್ಶನ ಆಗದೇ ಇರುವುದರಿಂದ ಸೋಮವಾರ ಸಂಜೆ ಚಂದ್ರದರ್ಶನ ಕಾರ್ಯಕ್ರಮ ನಡೆಯಿತು. ರಾತ್ರಿ 8.30ಕ್ಕೆ ವಾದ್ಯಮೇಳದೊಂದಿಗೆ ದೇವರ ಆವಾಹನೆ ಮಾಡಿಕೊಂಡು ಈಶ್ವರ ದೇವಾಲಯದ ಪ್ರಾಂಗಣಕ್ಕೆ ಬಂದ ಶ್ರೀ ಆಂಜನೇಯ ಸ್ವಾಮಿ ದೇವರ ಗಣಮಗ ವೆಂಕಟೇಶ ಅವರು, ‘ತುಂಬಿದ ಕೊಡ ಮೂರು ಚೂರಾದೀತು, ಶಿವನ ಚಕ್ರ ಮುರಿದೀತು, ಸಂಪು- ಪರಾಕ್’ ಎಂದು ಕಾರ್ಣೀಕ ನುಡಿದರು.
ಕಾರ್ಣೀಕ ವಾಣಿಯನ್ನು ಕೇಳಿದ ಭಕ್ತರು, ವ್ಯವಸಾಯ, ರಾಜಕೀಯ, ಪ್ರಕೃತಿಯ ಸುತ್ತ ಅರ್ಥೈಸಿಕೊಳ್ಳುತ್ತ ಮನೆಗೆ ಸಾಗಿದ್ದು ಕಂಡುಬಂತು.