ಧಾರವಾಡ: ಕವಿತೆಗಳನ್ನು ಬರೆ_ಯುವುದಕ್ಕಿಂತ ಅದರ ಸಾರಾಂಶ ಅರ್ಥೈಸಿಕೊಳ್ಳುವುದು ಮುಖ್ಯ. ಕಾವ್ಯಕ್ಕೆ ನಿಸರ್ಗ ಪ್ರೀತಿಸುವ ಶಕ್ತಿ ಇದೆ. ನಿಸರ್ಗದಲ್ಲಿನ ಹಾಗೂ ಮನಸ್ಸಿನ ಭಾವ ಒಂದೇ ಆಗಿರಬೇಕು. ಅಂದಾಗ ಮಾತ್ರ ಉತ್ತಮ ಕವನ ರಚಿಸಲು ಸಾಧ್ಯ ಎಂದು ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.
ಕರ್ನಾಟಕ ಕಲಾ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾಲೇಜು ಆವರಣದ ಫ್ಯಾರನ್ ಮೆಮೋರಿಯಲ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾಚೈತ್ರ ಕವಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕವಿ ವಿಮರ್ಶಕ, ಓದುಗ ಹಾಗೂ ಕೇಳುಗನಾಗಿಯೂ ಕಾವ್ಯವನ್ನು ಆಸ್ವಾದಿಸುತ್ತಾನೆ. ಹೀಗಾಗಿಯೇ ಕಾಳಿದಾಸನಿಂದ ಹಿಡಿದು ಷೇಕ್ಸ್ಪಿಯರ್ ವರೆಗಿನ ಕವಿಗಳು ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ ಎಂದರು.
ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ಇತಿಹಾಸದಲ್ಲಿ ಧಾರವಾಡ ತನ್ನದೇ ಆದ ಮಹತ್ವ ಪಡೆದಿದೆ. ಗೋಕಾಕ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಿಂದ ಹಿಡಿದು, ಇಂದಿಗೂ ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ತಾಯಿ ಎಂಬಂತೆ ಧಾರವಾಡ ತನ್ನದೇ ಆದ ಮಹತ್ವ ಬೀರುತ್ತಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಸಂಸ್ಥೆಯೊಂದು ನೂರು ವರ್ಷಗಳು ಪೂರೈಸುವುದು ಸಾಮಾನ್ಯದ ಮಾತಲ್ಲ. ಅದರಲ್ಲೂ ಧಾರವಾಡ ಕೆಸಿಡಿ ಹಳೆಯ ವಿದ್ಯಾರ್ಥಿಗಳು ದೇಶ ಹಾಗೂ ವಿದೇಶಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುವ ಮೂಲಕ ಕಾಲೇಜಿನ ಕೀರ್ತಿಯನ್ನು ಜಗತ್ತಿನಾದ್ಯಂತ ಸಾರಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಸಾಹಿತಿ ಚಂದ್ರಶೇಖರ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ, ವಿ.ಎಚ್. ಕಲಾದಗಿ, ಬಸು ಬೇವಿನಗಿಡದ, ಪ್ರೊ. ಆರ್.ಎಲ್. ಜಾಡರ, ಡಾ. ಪ್ರಭಾಕರ ಕಾಂಬಳೆ, ಎ.ಆರ್. ಯಾರ್ದಿ,
ಪ್ರೊ. ಮುಕುಂದ ಲಮಾಣಿ, ಡಾ. ಮಲ್ಲಿಕಾರ್ಜುನ ತರ್ಲಗಟ್ಟ ಇದ್ದರು.