ಹುಣಸಗಿ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲಿ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಮಾದಿಗ ಯುವ ಸೇನೆ ವತಿಯಿಂದ ತಹಶೀಲ್ದಾರ್ ಸುರೇಶ ಚವಲ್ಕರ್ ಅವರ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಹುಣಸಗಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಗರಟಗಿ ಮಾತನಾಡಿ, ‘ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಅನೇಕ ರೀತಿಯ ಹೋರಾಟಗಳ ಮೂಲಕ ಆಗ್ರಹಿಸ ಲಾಗಿದೆ. ಆದರೂ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೆಲ ದಿನಗಳ ಹಿಂದಷ್ಟೆ ಸರ್ಕಾರದಿಂದ ರಚನೆಯಾದ ಸಮಿತಿಯೊಂದರ ವರದಿಯನ್ನು ಸಚಿವ ಸಂಪುಟ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ ನ್ಯಾ.ಸದಾಶಿವ ವರದಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ವಿಳಂಬ ಮಾಡು ತ್ತಿರುವುದೇಕೆ?’ ಎಂದು ಪ್ರಶ್ನಿಸಿದರು.
ಸಂಘಟನೆಯ ಯಮನಪ್ಪ ಚನ್ನೂರ, ಕಾಶಿನಾಥ ಹಾದಿಮನಿ, ಮಲ್ಲಿಕಾರ್ಜುನ ಬಾಂಬೆಕರ್, ರಂಗಣ್ಣ ಸೂಗೂರ, ಪ್ರಭು ಕಚಕನೂರ ಪರಮಣ್ಣ ಕಟ್ಟಿಮನಿ, ಬಸವರಾಜ ಹಳ್ಳಿ, ಜುಮ್ಮಣ್ಣ ಬಲಶೆಟ್ಟಿಹಾಳ, ಗುರುರಾಜ ಇದ್ದರು.