1977ರಲ್ಲಿ ಬಿಡುಗಡೆಯಾದ ಕನ್ನಡದ ಸನಾದಿ ಅಪ್ಪಣ್ಣ ಚಲನಚಿತ್ರದಲ್ಲಿ, ಡಾ.ರಾಜ್ಕುಮಾರ್ ಅವರು ಶಹನಾಯಿ ವಾದಕರಾಗಿ ಅಭಿನಯಿಸಿದ ದೃಶ್ಯಗಳಿಗೆ ಅವಶ್ಯವಾಗಿದ್ದ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನ್ ಅವರು ನುಡಿಸಿದ್ದಾರೆ. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ‘ಕರೆದರೂ ಕೇಳದೆ’ ಹಾಡಿನಲ್ಲಿ ಬರುವ ಶಹನಾಯಿ ವಾದನವೂ ಬಿಸ್ಮಿಲ್ಲಾ ಅವರದ್ದೇ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ಭಾರತರತ್ನ ಪಡೆದ ಮೂರನೆಯ ಶಾಸ್ತ್ರೀಯ ಸಂಗೀತಗಾರ. ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಇವರು ಆಗಸ್ಟ್ 21, 2006ರಂದು ನಿಧನರಾದರು.