ಬೆಂಗಳೂರು: ‘ವಿಕ್ರಮ್ ಇನ್ವೆಸ್ಟ್ ಮೆಂಟ್ ಕಂಪನಿ’ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪದಡಿ ಜೈಲು ಸೇರಿರುವ ಕಂಪನಿ ನಿರ್ದೇಶಕ ರಾಘವೇಂದ್ರ ಶ್ರೀನಾಥ್ ಸಂಪಾದಿಸಿರುವ ಆಸ್ತಿ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಬಿಬಿಎಂಪಿ ಹಾಗೂ ನೋಂದಣಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಬನಶಂಕರಿ ಪೊಲೀಸರು, ‘ರಾಘವೇಂದ್ರ ಶ್ರೀನಾಥ್ ಹಾಗೂ ಆತನ ಸಂಬಂಧಿಕರ ಹೆಸರಿನಲ್ಲಿರುವ ಆಸ್ತಿ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿ’ ಎಂದು ಕೋರಿದ್ದಾರೆ.
‘ಬಾಲಾಜಿ ಅಗರಬತ್ತಿ ಕಂಪನಿ ಮಾಲೀಕ ಬಾಲಾಜಿ ನೀಡಿದ್ದ ದೂರಿನನ್ವಯ ಆರೋಪಿಗಳನ್ನು ಬಂಧಿಸಿದ್ದೆವು. ವಿಚಾರಣೆ ವೇಳೆ ಅವರ್ಯಾರೂ ಆಸ್ತಿ ಬಗ್ಗೆ ಬಾಯ್ಬಿಟ್ಟಿಲ್ಲ’ ಎಂದು ಪೊಲೀಸರು ತಿಳಿಸಿದರು.
‘ಕೆಲವೇ ದಿನಗಳಲ್ಲಿ ಮಾಹಿತಿ ನೀಡುವುದಾಗಿ ಬಿಬಿಎಂಪಿ ಹಾಗೂ ನೋಂದಣಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಅದು ಕೈ ಸೇರಿದ ಬಳಿಕ, ಆ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ. ಅದರ ನಿರ್ದೇಶನ ಪಡೆದು ಆಸ್ತಿ ಜಪ್ತಿ ಮಾಡಲು ಕ್ರಮಕೈಗೊಳ್ಳಲಿದ್ದೇವೆ’ ಎಂದರು.
‘ಕಂಪನಿಯ ನಿರ್ದೇಶಕಿ ಸುನೀತಾ ಆಚಾರ್ಯ (ಆರೋಪಿ ರಾಘವೇಂದ್ರ ಶ್ರೀನಾಥ್ ಪತ್ನಿ) ತಲೆಮರೆಸಿಕೊಂಡಿದ್ದಾಳೆ’ ಎಂದರು.