ಬೆಂಗಳೂರು: ‘ಬಿಜೆಪಿ ಕೈಗೆ ಮತ್ತೆ ಅಧಿಕಾರ ಸಿಕ್ಕಿದರೆ ಬೆಂಗಳೂರು ಮತ್ತೆ ಕಸದ ನಗರಿಯಾಗಲಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಕಾಂಗ್ರೆಸ್ ಆರಂಭಿಸಿರುವ ‘ನಮ್ಮ ಬೆಂಗಳೂರು ನಮ್ಮ ಹೆಮ್ಮೆ’ ಪಾದಯಾತ್ರೆ ಅಂಗವಾಗಿ ಕೆ.ಆರ್.ಪುರದಲ್ಲಿ ಬುಧವಾರ ನಡೆದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಕ್ಷೇತ್ರದ ಹಿಂದಿನ ಶಾಸಕರಿಬ್ಬರು ಏನೇನು ಲೂಟಿ ಮಾಡಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ಬೆಂಗಳೂರನ್ನು ರಕ್ಷಿಸಿ ಎಂದು ಅವರೇ ಈಗ ಬರುತ್ತಿದ್ದಾರೆ. ಅಂಥವರಿಂದ ಬೆಂಗಳೂರಿಗೆ ರಕ್ಷಣೆ ಇಲ್ಲ’ ಎಂದರು.
‘ವಿಶ್ವದ ಅತ್ಯಂತ ಕ್ರಿಯಾಶೀಲ ನಗರ ಎಂಬ ಹೆಮ್ಮೆಗೆ ಬೆಂಗಳೂರು ಪಾತ್ರವಾಗಿದೆ. ಐದು ರೂಪಾಯಿಗೆ ಉಪಾಹಾರ ನೀಡುವ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ’ ಎಂದು ಹೇಳಿದರು.
ಕೆ.ಆರ್. ಪುರದಲ್ಲಿ ಕಾಂಗ್ರೆಸ್ ಗೆದ್ದರೆ ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಲಿದೆ. ಶಾಸಕ ಬೈರತಿ ಬಸವರಾಜ್ ನೇರವಾಗಿ ಮುಖ್ಯಮಂತ್ರಿ ಬಳಿ ಹೋಗಿ ಕೆಲಸ ಮಾಡಿಸಿಕೊಂಡು ಬರುತ್ತಾರೆ. ಅಂಥವರನ್ನು ಗೆಲ್ಲಿಸಲು ಜನ ಮತ್ತೊಮ್ಮೆ ಸಂಕಲ್ಪ ಮಾಡಬೇಕು ಎಂದರು.
ಬೈರತಿ ಬಸವರಾಜ್ 104 ಕೊಲೆ ಮಾಡಿಸಿದ್ದಾರೆ ಎನ್ನುವ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಅವರು, ಮುಸ್ಲಿಂ ಸಮುದಾಯದವರ ಕೊಲೆಗಳ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು
ಗೃಹಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.