ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಮತಯಂತ್ರ, ಸಿಬ್ಬಂದಿ ಸಜ್ಜು

Last Updated 22 ಮಾರ್ಚ್ 2018, 7:04 IST
ಅಕ್ಷರ ಗಾತ್ರ

ಬಾಗಲಕೋಟೆ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ 14,73,840 ಮತದಾರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ ಜಿಲ್ಲಾಧಿಕಾರಿ ಕೆ.ಜಿ. ಶಾಂತರಾಮ್‌, ಚುನಾವಣೆ ಸಿದ್ಧತೆಯ ಬಗ್ಗೆ ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡರು.

ಜಿಲ್ಲೆಯಲ್ಲಿ ಕ್ಷೇತ್ರವಾರು ಮತದಾರರ ಪ್ರಮಾಣವನ್ನು ಹಂಚಿಕೊಂಡ ಅವರು, ಬಾಗಲಕೋಟೆ ಕ್ಷೇತ್ರದಲ್ಲಿ ಅತಿಹೆಚ್ಚು 2,25,919 ಮತದಾರರು ಇದ್ದರೆ, ಮುಧೋಳ ಕ್ಷೇತ್ರದಲ್ಲಿ ಅತಿ ಕಡಿಮೆ 1,91,922 ಮತದಾರರು ಇದ್ದಾರೆ. ವಿಶೇಷವೆಂದರೆ ಮುಧೋಳ ಹಾಗೂ ಬೀಳಗಿ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಪ್ರಮಾಣವೇ ಹೆಚ್ಚಿದ್ದಾರೆ ಎಂದರು.

‘2017ರ ನವೆಂಬರ್ 30ಕ್ಕೆ ಜಿಲ್ಲೆಯಲ್ಲಿ ಒಟ್ಟು 14,75,850 ಮತದಾರರು ಇದ್ದರು. ಫೆಬ್ರುವರಿ ಅಂತ್ಯಕ್ಕೆ ಪೂರ್ಣಗೊಂಡ ಮತದಾರರ ಪಟ್ಟಿ ಪರಿಷ್ಕರಣೆ ನಂತರ 14,73,840 ಮತದಾರರು ಉಳಿದಿದ್ದಾರೆ. ಹೊಸದಾಗಿ 49,358 ಮತದಾರರು ಸೇರ್ಪಡೆಗೊಂಡಿದ್ದಾರೆ. ಬೇರೆಡೆಗೆ ಸ್ಥಳಾಂತರ, ಹೆಸರು ಪುನರಾವರ್ತನೆ ಹಾಗೂ ಸಾವಿಗೀಡಾದ ಕಾರಣ 51,368 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ’ ಎಂದು ತಿಳಿಸಿದರು.

ಮತಯಂತ್ರಗಳು ಸಿದ್ಧ: ಗುಜರಾತ್‌ ಚುನಾವಣೆಯ ನಂತರ ಇಲ್ಲಿಗೆ ತರಲಾದ 2273 ಮತಯಂತ್ರಗಳು ಈಗಾಗಲೇ ಸಿದ್ಧಗೊಂಡಿವೆ.
ರಾಜಕೀಯ ಪಕ್ಷಗಳ ಮುಖಂಡರಿಗೆ ಪಾತ್ಯಕ್ಷಿಕೆ ತೋರಿಸಿ, ಮೊದಲ ಹಂತದ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಮತದಾರನಿಗೆ ಮತ ಹಾಕಿದ ನಂತರ ಖಾತರಿ ನೀಡಲು ವಿ.ವಿ ಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದರು.

10,034 ಸಿಬ್ಬಂದಿ: ಜಿಲ್ಲೆಯಲ್ಲಿ ಈ ಬಾರಿ ಚುನಾವಣೆ ಪ್ರಕ್ರಿಯೆಗೆ 10,034 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಅಷ್ಟು ಪ್ರಮಾಣದ ಸಿಬ್ಬಂದಿ ಲಭ್ಯವಿದ್ದಾರೆ. ನೈಜ ಕಾರಣ ಹೊರತಾಗಿ ಯಾವುದೇ ಪ್ರಭಾವ ಬೀರಿ ಚುನಾವಣೆ ಕರ್ತವ್ಯದಿಂದ ಬಿಡುಗಡೆ ಹೊಂದಲು ಯಾವುದೇ ಸಿಬ್ಬಂದಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಒತ್ತಡ, ಪ್ರಭಾವಕ್ಕೆ ಅವಕಾಶವಿಲ್ಲ: ಮತದಾನದ ದಿನ ಹಾಗೂ ಅದಕ್ಕೂ ಮುನ್ನ ಮತದಾರರ ಮೇಲೆ ಯಾವುದೇ ಒತ್ತಡ ಹೇರುವ ಇಲ್ಲವೇ ಪ್ರಭಾವ ಬಳಸಿ ಮತ ಹಾಕಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ಅಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿ ನಿಗಾ ಇಡುವ ಕಾರ್ಯಕ್ಕೆ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಇದೇ ವೇಳೆ ಸ್ಪಷ್ಟಪಡಿಸಿದರು.
**
ಸ್ವೀಪ್ ಚಟುವಟಿಕೆಗೆ ಸಿದ್ಧತೆ...
ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಬಾಗಲಕೋಟೆ ಮತ ಕ್ಷೇತ್ರದಲ್ಲಿ ಅತಿ ಕಡಿಮೆ ಪ್ರಮಾಣದ ಮತದಾನ ನಡೆದಿದೆ. ತೇರದಾಳ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ನಡೆದಿದೆ. ಬಾಗಲಕೋಟೆ ಕ್ಷೇತ್ರದ ಸೇರಿದಂತೆ ಜಿಲ್ಲೆಯಾದ್ಯಂತ ಕಡಿಮೆ ಮತದಾನ ನಡೆದಿರುವ 300 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಚಟುವಟಿಕೆ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ತಿಳಿಸಿದರು.

ಸ್ವೀಪ್ ಚಟುವಟಿಕೆಯಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು. ಜನವಸತಿ ಪ್ರದೇಶಗಳಲ್ಲಿ ಮತದಾನದ ಮಹತ್ವ ಸಾರುವ ಸಂದೇಶ ಹೊತ್ತ ಬಲೂನ್‌ಗಳನ್ನು ಹಾರಿಬಿಡಲಾಗುವುದು ಎಂದರು.
**
7835 ಅಂಗವಿಕಲ ಮತದಾರರು
ಜಿಲ್ಲೆಯಲ್ಲಿ ಒಟ್ಟು 7835 ಅಂಗವಿಕಲ ಮತದಾರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಮತದಾನ ಮಾಡಲು ಅವರಿಗೆ ವಿಶೇಷ ರ್‍ಯಾಂಪ್ ವ್ಯವಸ್ಥೆ ಮಾಡಲಾಗುವುದು. ಚುನಾವಣೆ ವ್ಯವಸ್ಥೆ ಮೇಲ್ವಿಚಾರಣೆಗೆ ವಿವಿಧ ವಿಭಾಗಗಳಲ್ಲಿ 23 ಮಂದಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಾಂತಾರಾಮ್ ಹೇಳಿದರು.

ಚುನಾವಣೆ ವೇಳೆ ಅಕ್ರಮ ಮದ್ಯ ಹಾಗೂ ನಕಲಿ ಮದ್ಯದ ಹರಿವು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗ ಜಿಲ್ಲೆಯಲ್ಲಿ ಆರು ಕಡೆ ತಪಾಸಣಾ ಕೇಂದ್ರಗಳಿದ್ದು, ಇನ್ನೂ 31 ಕಡೆ ತಪಾಸಣಾ ಕೇಂದ್ರಗಳನ್ನು ತೆರೆಯಲು ಜಾಗ ಗುರುತಿಸಲಾಗಿದೆ ಎಂದು ಎಸ್‌ಪಿ ರಿಷ್ಯಂತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT