ಹಳೇಬೀಡು: ಬಗರ್ಹುಕುಂ ಸಾಗುವಳಿ ಜಮೀನು ಮಂಜೂರಾತಿಗೆ ಅರ್ಜಿಸಲ್ಲಿಸಿದ 100 ಮಂದಿ ಹಳೇಬೀಡು ಹೋಬಳಿಯ ರೈತರಿಗೆ ಸಾಗುವಳಿ ಪತ್ರ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಎಚ್.ಎಸ್.ಪರಮೇಶ್ ಹೇಳಿದರು.
ಪಟ್ಟಣದ ಉಡಸಲಮ್ಮ ದೇವಾಲಯ ಆವರಣದಲ್ಲಿ ಬುಧವಾರ ನಡೆದ ರೈತರಿಗೆ ಸಾಗುವಳಿ ಪತ್ರವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಗರ್ ಹುಕುಂ ಅರ್ಜಿ ಪರಿಶೀಲನೆಯನ್ನು ಚುರುಕು ಗೊಳಿಸಲಾಗಿದೆ. ಮಾರ್ಚ್ 31ರೊಳಗೆ ಅರ್ಜಿದಾರರ ದಾಖಲಾತಿಗಳನ್ನು ಇತ್ಯರ್ಥಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಅರ್ಹರನ್ನು ಗುರುತಿಸಿ ಪೂರ್ಣ ಪ್ರಮಾಣದಲ್ಲಿ ಸಾಗುವಳಿ ಪತ್ರ ವಿತರಣೆ ಮುಗಿಸಬೇಕು ಎಂಬ ಗುರಿ ಹೊಂದಲಾಗಿದೆ ಎಂದು ಪರಮೇಶ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎಂ.ಮಂಜಪ್ಪ ಮಾತನಾಡಿ, ಬಗರ್ಹುಕುಂನಲ್ಲಿ ರೈತರು ಪಡೆದ ದರಖಾಸ್ತು ಭೂಮಿಯಲ್ಲಿ ಕೃಷಿ ಕೆಲಸ ನಡೆಸಬೇಕು. ತಮ್ಮ ಸಾಗುವಳಿ ಜಮೀನಿನ ದಾಖಲಾತಿ ಕೈಸೇರಿ ಪೂರ್ಣ ಹಕ್ಕು ಬಂದಾಗ ಮಾರಾಟ ಮಾಡಬಾರಾದು. ದೇಶದ ಜನತೆಗೆ ಅನ್ನಕೊಡಲು ರೈತರಿಂದ ಮಾತ್ರ ಸಾಧ್ಯ. ಹೀಗಾಗಿ ದರಖಾಸ್ತು ಜಮೀನನ್ನು ರೈತರು ಉಳಿಸಿಕೊಳ್ಳಬೇಕು ಎಂದರು.
ರೈತ ಮುಖಂಡ ಕೆ.ಪಿ.ಕುಮಾರ್, ಬಗರ್ಹುಕುಂ ಸಮಿತಿ ಸದಸ್ಯರು ಹಾಗೂ ಕಂದಾಯ ಇಲಾಖೆಯವರು ರೈತರನ್ನು ಅಲೆದಾಡಿಸಬಾರದು. ರೈತರು ಸಕಾಲಕ್ಕೆ ದಾಖಲಾತಿ ಹೊಂದಿಸಲು ಸೂಕ್ತವಾದ ಮಾಹಿತಿ ನೀಡಬೇಕು ಎಂದರು.
ಪ್ರೊಬೆಷನರಿ ತಹಶೀಲ್ದಾರ್ ನಂದೀಶ್, ಉಪತಹಶೀಲ್ದಾರ್ ಕೆ.ಜಿ.ಪ್ರದೀಪ್, ಬಗರ್ಹುಕುಂ ಸಮಿತಿ ಸದಸ್ಯರಾದ ನ್ಯಾಯವಾದಿ ಲಿಂಗೇಶ್, ರಂಗನಾಥ, ಎಪಿಎಂಸಿ ಉಪಾಧ್ಯಕ್ಷ ನರಸೀಹೇಗೌಡ ಇದ್ದರು.