ಪುತ್ತೂರು: ‘ವಿಟ್ಲದ ಪಟ್ಟಣ ಪಂಚಾ ಯಿತಿಯಲ್ಲಿ ಈಗಾಗಲೇ ಕಾಮಗಾರಿ ಆರಂಭಗೊಂಡಿದೆ. ಪುತ್ತೂರಿನಲ್ಲಿ ಮಾತ್ರ ಇನ್ನೂ ಕಾಮಗಾರಿ ಆರಂಭ ಗೊಂಡಿಲ್ಲ. ವಿಳಂಬ ಯಾಕೆ? ಇಲ್ಲಿನ ಆಡಳಿತ ಬಿಜೆಪಿ ಜತೆ ಸೇರಿ ಶಾಸಕರ ವಿರುದ್ಧವೋ , ಜನರ ವಿರುದ್ಧವೋ ಕೆಲಸ ಮಾಡುತ್ತಿದೆಯೇನೋ ಎಂಬ ಅನುಮಾನ ಕಾಡುತ್ತಿದೆ’ ಎಂದು ಶಾಸಕಿ ಶಕುಂತಳ ಶೆಟ್ಟಿ ಹೇಳಿದರು.
ನಗರೋತ್ಥಾನ ಯೋಜನೆಯ ಅಡಿಯಲ್ಲಿ ಪುತ್ತೂರು ನಗರಸಭೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ₹25 ಕೋಟಿ ಅನುದಾನದ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಗರೋತ್ಥಾನ ಯೋಜನೆ ಕಾಮ ಗಾರಿ ಆರಂಭಿಸದೇ ಇರುವ ಬಗ್ಗೆ ನಗರ ಸಭೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕಿ ‘ನಗರಸಭೆ ವ್ಯಾಪ್ತಿಯಲ್ಲಿ ಎಸ್ಇಪಿಟಿ ಮತ್ತು ಎಸ್ಪಿ ಯೋಜನೆಯ ಕಾಮಗಾರಿ ಆರಂಭಿಸಿರಲಿಲ್ಲ. ಇದನ್ನು ತಿಳಿದ ನಾನು ಕೊನೆಗೆ ಪೌರಾಯುಕ್ತರಿಗೆ ನೋಟಿಸ್ ನೀಡಿ ದಿನಾಂಕ ಗೊತ್ತು ಮಾಡುವಂತೆ ತಿಳಿಸಬೇಕಾಯಿತು. ಇದು ತಿಳಿದ ಮೇಲೆ ನಗರಸಭೆ ತರಾತುರಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿದೆ’ ಎಂದರು.
‘ನಗರಸಭೆಯ ಆಡಳಿತ ವಿಳಂಬ ನೀತಿ ಅನುಸರಿಸುತ್ತಿರುವ ಕಾರಣ ನಾನು ಅನಿವಾರ್ಯವಾಗಿ ಅನುದಾನ ಹಂಚಿಕೆ ಸಮಿತಿಯ ಅಧ್ಯಕ್ಷೆ ಹಾಗೂ ಶಾಸಕಿ ಎಂಬ ನೆಲೆಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲೇಬೇಕಾಯಿತು’ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಸಹಾಯಕ ಕಾರ್ಯಪಾಲ ಎಂಜಿ ನಿಯರ್ ಪುರಂದರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡ ಗನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಕುಮಾರ್ ಶೆಟ್ಟಿ, ಜೋಕಿಂ ಡಿಸೋಜ ಇದ್ದರು.
21 ಕಾಮಗಾರಿ: ಆರಂಭದಲ್ಲಿ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಗ ರೋತ್ಥಾನ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರು ಬಳಿಕ ನಗರಸಭೆಯ ಕಚೇರಿ ಮುಂಭಾಗ ಮತ್ತು ಸಾಮೆತ್ತಡ್ಕ ಕೆಎಚ್ಪಿ ಕಾಲನಿ ಬಳಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಹಳೆ ನಗರಸಭಾ ಕಚೇರಿ ಕಟ್ಟಡ, ಎಂ.ಟಿ. ರಸ್ತೆ, ನೆಲ್ಲಿಕಟ್ಟೆ, ಬ್ರಹ್ಮನಗರ ಕಾಲನಿ, ಸಾಮೆತ್ತಡ್ಕ ಪಾರ್ಕ್, ದರ್ಬೆ ವೃತ್ತ, ಕೆಮ್ಮಿಂಜೆ ದೇವಸ್ಥಾನ, ಮುಕ್ರಂಪಾಡಿ ರಸ್ತೆ, ಮೊಟ್ಟೆತ್ತಡ್ಕ ಪರಿಶಿಷ್ಟ ಜಾತಿ ಕಾಲನಿ, ತೆಂಕಿಲ ಕಮ್ನಾರ್, ಬಪ್ಪಳಿಗೆ ಜಂಕ್ಷನ್, ಕಪ್ಪೆಕರೆ ರಸ್ತೆ, ಲಾಯಿಗುಂಡಿ, ಉಜ್ರುಪಾದೆ, ಬೊಳುವಾರು ವೃತ್ತ, ಮಂಜಲ್ಪಡ್ಪು, ಉಪ್ಪಿನಂಗಡಿ ರಸ್ತೆ, ಸಾಲ್ಮರ ಜಂಕ್ಷನ್, ಕೊರಜಿಮಜಲ್ಗಳಲ್ಲಿ ವಿವಿಧ ಕಾಮಗಾ ರಿಗೆ ಚಾಲನೆ ನೀಡಿದರು.
**
ನಗರಸಭೆ ಪ್ರಮುಖರು ಗೈರು
ಕಳೆದ ಭಾನುವಾರದಿಂದ ನಾವು ನಗರೋತ್ಥಾನ ಕಾಮಗಾರಿಗಳಿಗೆ ಚಾಲನೆ ನೀಡುತ್ತಾ ಬಂದಿದ್ದೇವೆ. ಆದರೆ ಇದೀಗ ಶಾಸಕರು ಆರಂಭವಾದ ಕಾಮಗಾರಿಗಳಿಗೇ ಮತ್ತೆ ಎರಡನೇ ಬಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಹೀಗಿರುವಾಗ ನಾವು ಯಾಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುವುದು ಅವರದ್ದೇ ಪಕ್ಷದ ನಗರಸಭೆಯ ಆಡಳಿತ ಸದಸ್ಯರ ಪ್ರಶ್ನೆಯಾಗಿದೆ.
ನಾನೇನು ಮಾಡಲಿ?: ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡ್, ಉಪಾಧ್ಯಕ್ಷ ವಿಶ್ವನಾಥ ಗೌಡ ಸೇರಿದಂತೆ ನಗರಸಭೆಯ ಯಾವುದೇ ಸದಸ್ಯರೂ ಈ ಸಂದರ್ಭದಲ್ಲಿ ಹಾಜರಿರಲಿಲ್ಲ. ಅವರಿಗೆ ನಾನೇ ತಿಳಿಸಿದ್ದೇನೆ ಬಾರದಿದ್ದರೆ ಏನು ಮಾಡಲಾಗುತ್ತದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಪ್ರತಿಕ್ರಿಯೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.