ಕನಕಪುರ: ರೈತರ ಕೃಷಿ ಪಂಪ್ಸೆಟ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಬೆಸ್ಕಾಂ ಇಲಾಖೆಯು ಕೈಗಾರಿಕಾ ಪ್ರದೇಶಗಳಿಗೆ ಮಾತ್ರ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಆರೋಪಿಸಿದರು.
ತಾಲ್ಲೂಕಿನ ಹಾರೋಹಳ್ಳಿ ಬೆಸ್ಕಾಂ ಕಚೇರಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಖಂಡಿಸಿ ಬುಧವಾರ ರೈತ ಸಂಘದ ಪದಾಧಿಕಾರಿಗಳು ಮುತ್ತಿಗೆ ಹಾಕಿ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸರ್ಕಾರ ರೈತರ ಪರ ಇದೆ. ವಿದ್ಯುತ್ ಇಲಾಖೆಯು ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಅನ್ನು ಗುಣಮಟ್ಟದಲ್ಲಿ ನೀಡ
ಲಾಗುತ್ತಿದೆ ಎಂದು ಇಂಧನ ಸಚಿವರು ನಿರಂತರವಾಗಿ ಜಾಹೀರಾತು ನೀಡುತ್ತಿದ್ದಾರೆ ಎಂದರು.
ಜಾಹೀರಾತಿಗೆ ಖರ್ಚು ಮಾಡುತ್ತಿರುವ ಹಣದಲ್ಲಿ ಇನ್ನೂ ಹೆಚ್ಚಿನ ವಿದ್ಯುತ್ ನೀಡಬಹುದಿತ್ತು. ಆದರೆ ರೈತರಿಗೆ ನೀಡಬೇಕಾದಷ್ಟು ವಿದ್ಯುತ್ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.
ಕೈಗಾರಿಕಾ ಪ್ರದೇಶದಿಂದ ಹಣ ಸಿಗುತ್ತದೆ ಎಂಬ ಕಾರಣಕ್ಕೆ ನಿರಂತರ ವಾಗಿ ವಿದ್ಯುತ್ ಪೂರೈಕೆಗೆ ಪ್ರತ್ಯೇಕ ಲೈನ್ಗಳಲ್ಲಿ ನೀಡಲಾಗುತ್ತಿದೆ ಎಂದರು.
ಆದರೆ, ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು 7 ತಾಸುಗಳ ಕರೆಂಟ್ ಅನ್ನು ಎರಡು ಭಾಗವಾಗಿ ಮಾಡಿ ಹಗಲಿನಲ್ಲಿ 3 ತಾಸು, ರಾತ್ರಿಯಲ್ಲಿ 4 ತಾಸು ನೀಡಿ ಹತ್ತು ಬಾರಿ ಕರೆಂಟ್ ಕಟ್ ಮಾಡುತ್ತಾರೆ. ಇದರಿಂದ ರೈತ ಜಮೀನಿಗೆ ನೀರು ಹಾಯಿಸಲು ಆಗುತ್ತಿಲ್ಲ ಎಂದರು.
ಕೃಷಿಯನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಉತ್ತಮ ರೀತಿ ಯಲ್ಲಿ ವಿದ್ಯುತ್ ನೀಡುತ್ತಿಲ್ಲ ಎಂದರು.
ಇದರಿಂದ ರೈತರಿಗೆ ಕಿರುಕುಳ ಆಗುತ್ತಿದೆ. ಕೃಷಿಯು ಒಂದು ಕೈಗಾರಿಕೆ ಎಂದು ಹೇಳುವ ಸರ್ಕಾರ ರೈತರಿಗೆ ಕೊಡುತ್ತಿರುವ 7 ತಾಸುಗಳನ್ನಾದರೂ ಗುಣಮಟ್ಟದಲ್ಲಿ ನಿರಂತರವಾಗಿ ಪೂರೈಕೆ ಮಾಡಬೇಕು.
ಇಲ್ಲವಾದಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಕ್ರಮ ಸಕ್ರಮ ಯೋಜನೆಯಲ್ಲಿ ಟ್ರಾನ್ಸ್ಫಾರ್ಮರ್ ಅಳವಡಿಸುವುದರಲ್ಲಿ ಭಾರಿ ವಿಳಂಬವಾಗುತ್ತಿದೆ ಎಂದರು. ಅಕ್ರಮ ಸಕ್ರಮಕ್ಕೆ ಹಣ ಕೊಟ್ಟಿರುವುದಲ್ಲದೆ ರೈತರಿಂದ ಹೆಚ್ಚುವರಿ ಲಂಚವಾಗಿ ಹಣ ವಸೂಲಿ ಮಾಡಿ ಭಾರಿ ಅವ್ಯವಹಾರ ನಡೆಸಲಾಗಿದೆ ಎಂದು ದೂರಿದರು.
ಇಲಾಖೆಯ ನಿರ್ದೇಶನದಂತೆ ಲೈನ್ಮ್ಯಾನ್ಗಳು ರೈತರಿಂದ ಹೆಚ್ಚುವರಿ ಹಣ ಪಡೆಯುತ್ತಿದ್ದಾರೋ ಅಥವಾ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರದಂತೆ ವಂಚನೆ ಮಾಡುತ್ತಿದ್ದಾರೋ ಗೊತ್ತಿಲ್ಲ. ರೈತರಿಗಂತೂ ನಿರಂತರ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರ ಹಲವು ಬೇಡಿಕೆಗಳನ್ನು ಒತ್ತಾಯಿಸಿದ ಮನವಿ ಪತ್ರವನ್ನು ಹಾರೋಹಳ್ಳಿ ಎಇಇ ಕೃಷ್ಣಮೂರ್ತಿ ಅವರಿಗೆ ನೀಡಲಾಯಿತು.
ರೈತ ಸಂಘದ ಜಿಲ್ಲಾ ಮುಖಂಡ ರಾದ ಶ್ರೀನಿವಾಸ, ಬಸವರಾಜು, ಶಿವಲಿಂಗಯ್ಯ, ತಾಲ್ಲೂಕು ಅಧ್ಯಕ್ಷ ಶಶಿಕುಮಾರ್, ಕಾರ್ಯಾಧ್ಯಕ್ಷ ಬಸವರಾಜು ಇದ್ದರು.
ಕಾರ್ಯದರ್ಶಿ ಶಿವರಾಮ್, ಮರಳವಾಡಿ ಹೋಬಳಿ ಅಧ್ಯಕ್ಷ ಪ್ರದೀಪ್, ಮುಖಂಡರಾದ ದೇವರಾಜು, ರವಿಕುಮಾರ್, ಲಕ್ಷ್ಮೀನಾರಾಯಣ, ದಿಲೀಪ್, ಪುಟ್ಟಸ್ವಾಮಯ್ಯ, ರಾಜು, ಚೆನ್ನೇಗೌಡ, ಲಿಂಗೇಗೌಡ, ಬಸವಲಿಂಗಪ್ಪ, ಮಲ್ಲೇಶ್ ಅವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.