‘ವಚನ: ಹೊಸ ಧರ್ಮದ ತಳಹದಿ?!’ (ಸಂಗತ, ಮಾ. 22) ಲೇಖನಕ್ಕೆ ಈ ಪ್ರತಿಕ್ರಿಯೆ. ಲಿಂಗಾಯತ ಒಂದು ಹೊಸ ‘ಧರ್ಮ’ ಅಲ್ಲ. ಯಾವುದಾದರೂ ಒಂದು ಧರ್ಮವನ್ನು ಸ್ಥಾಪಿಸುವುದು, ಇರುವ ಒಂದನ್ನು ಅಳಿಸಿ ಹಾಕುವುದು ಪ್ರಜಾಸತ್ತಾತ್ಮಕ ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯೂ ಅಲ್ಲ. ಪ್ರಸ್ತುತ ರಾಜ್ಯ ಸರ್ಕಾರವು ಅಂಥದೊಂದನ್ನು ಮಾಡಿಯೂ ಇಲ್ಲವೆಂದು ಭಾವಿಸುತ್ತೇನೆ.
ಸರ್ಕಾರ ಮುಂದಾಗಿರುವುದು, ‘ಲಿಂಗಾಯತ’ ಎಂಬ ಸಮುದಾಯಕ್ಕೆ ಮೀಸಲಾತಿ ಮುಂತಾದ ಸವಲತ್ತುಗಳನ್ನು ಕೊಡುವ ‘ಲೌಕಿಕ’ ಕಾರ್ಯಕ್ಕೆ. ವೈಯಕ್ತಿಕ, ಆಧ್ಯಾತ್ಮಿಕ ಆಯಾಮ ಇದಕ್ಕಿರುವುದು ಸಾಧ್ಯವಿಲ್ಲ. ಸರ್ಕಾರದ ಕ್ರಮ ರಾಜಕೀಯಪ್ರೇರಿತ ಇರಬಹುದು. ವೋಟಿನ ಬೇಳೆ ಬೇಯಿಸಿಕೊಳ್ಳುವ ಉದ್ದೇಶದ್ದೂ ಇರಬಹುದು. ಚುನಾವಣೆ ಇದಕ್ಕೆ ಉತ್ತರ ನೀಡಬಹುದು.
ಸರ್ಕಾರವು ಲಿಂಗಾಯತರಿಗೆ ರಿಯಾಯಿತಿ, ವಿನಾಯಿತಿ ಗಳನ್ನು ಕೊಡುವುದಾದರೆ, ಅದಕ್ಕೆ ಸಾಹಿತ್ಯಕ ಆಧಾರ ಬೇಕಾಗುವುದಿಲ್ಲ. ಅಲ್ಪಸಂಖ್ಯಾತರ ವರ್ಗೀಕರಣಕ್ಕೆ ಯಾವುದೇ ಕಾಲದ ಕೇಂದ್ರ ಅಥವಾ ರಾಜ್ಯ ಸರ್ಕಾರ, ಧರ್ಮ ಗ್ರಂಥಗಳನ್ನು ಆಧಾರವಾಗಿ ಸ್ವೀಕರಿಸಿದ ಉದಾಹರಣೆಯಿಲ್ಲ.
ಹೀಗಾಗಿ, ವಚನಶಾಸ್ತ್ರ- ಸಾಹಿತ್ಯಕ್ಕೂ ಅಲ್ಪಸಂಖ್ಯಾತರಸೌಲಭ್ಯಗಳಿಗೆ ಲಿಂಗಾಯತ ಪಂಗಡವನ್ನು ಮಾನ್ಯ ಮಾಡುವಸರ್ಕಾರದ ಉದ್ದೇಶಕ್ಕೂ ತಳಕು ಹಾಕುವುದು ಕುಚೋದ್ಯವೆನಿಸುತ್ತದೆ. ಇದು ಪ್ರಯತ್ನಪೂರ್ವಕ ಅಪಪ್ರಚಾರ ಆಗಿದ್ದು, ಸಾಮಾಜಿಕ ಸಾಮರಸ್ಯವನ್ನು ಕೆಡಿಸುವ ಉದ್ದೇಶ ಹೊಂದಿರುವಂತೆ ಕಾಣಿಸುತ್ತದೆ!