ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ–ಮೈಸೂರು ಮುಖ್ಯಮಂತ್ರಿಗಳ ಸಭೆ ಸಲಹೆ ಇಲ್ಲ: ಶುಕ್ಲ
ನವದೆಹಲಿ, ಮಾ. 22– ಗಡಿ ವಿವಾದದಲ್ಲಿ ಈಗಲೇ ಮಹಾರಾಷ್ಟ್ರ ಮತ್ತು ಮೈಸೂರು ರಾಜ್ಯ ಮುಖ್ಯಮಂತ್ರಿಗಳ ಸಭೆ ಕರೆಯುವ ಯಾವುದೇ ಸಲಹೆ ಇಲ್ಲ ಎಂದು ಗೃಹಶಾಖೆ ಸ್ಟೇಟ್ ಸಚಿವ ಶ್ರೀ ವಿ.ಸಿ. ಶುಕ್ಲ ಅವರು ಇಂದು ಲೋಕಸಭೆಯಲ್ಲಿ ಶ್ರೀ ಟಿ.ಎಸ್. ದೇವ್ ಅವರ ಪ್ರಶ್ನೆಗೆ ಉತ್ತರ ನೀಡುತ್ತ ತಿಳಿಸಿದರು.
ಹತ್ತು ಅಂಶಗಳ ಆರ್ಥಿಕ ಯೋಜನೆಗೆ ಅಲಕ್ಷ್ಯ
ನವದೆಹಲಿ, ಮಾ. 22– ಬಹಳ ಹೆಮ್ಮೆಯಿಂದ ಜಬ್ಬಲ್ಪುರದ ಎ.ಐ.ಸಿ.ಸಿ. ಅಧಿವೇಶನದಲ್ಲಿ ಅಂಗೀಕರಿಸಲಾದ ದಶಾಂಶ ಕಾರ್ಯಕ್ರಮವನ್ನು ಮೂಲೆಗೊತ್ತಲಾಗಿದೆಯೆಂದು ಕೇಂದ್ರ ಸರ್ಕಾರವನ್ನು ಇಂದು ಟೀಕಿಸಲಾಯಿತು.
ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದಸಭೆಯಲ್ಲಿ 90 ನಿಮಿಷಗಳ ಕಾಲ, ಸರ್ಕಾರದ ನಿಷ್ಕ್ರಿಯೆಯನ್ನು ಹಲವು ಭಾಷಣಕಾರರು ಕಟುವಾಗಿ ಟೀಕಿಸಿದರು.
ಎಂಜಿನಿಯರುಗಳ ಸಮಸ್ಯೆಗೆ ತತ್ಕ್ಷಣವೇ ಸರ್ಕಾರದ ಕ್ರಮ: ಇಂದಿರಾ ಆಶ್ವಾಸನೆ
ನವದೆಹಲಿ, ಮಾ. 22– ಎಂಜಿನಿಯರುಗಳಲ್ಲಿ ನಿರುದ್ಯೋಗ ಹೆಚ್ಚುತ್ತಿರುವುದು ಸರ್ಕಾರಕ್ಕೆ ತುಂಬಾ ಕಳವಳವನ್ನುಂಟುಮಾಡಿದೆಯೆಂದೂ ಈ ಸಮಸ್ಯೆಯನ್ನು ಎದುರಿಸಲು ಅದು ತತ್ಕ್ಷಣವೇ ಕ್ರಮಗಳನ್ನು ಕೈಗೊಳ್ಳುವುದೆಂದೂ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ರಾಜ್ಯಸಭೆಯಲ್ಲಿ ಹೇಳಿದರು.