ನವದೆಹಲಿ: ಲೋಕಪಾಲ ನೇಮಕ ಮತ್ತು ರೈತರ ಬೆಳೆಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ರಾಮಲೀಲಾ ಮೈದಾನದಲ್ಲಿ ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ.
ಅಣ್ಣಾ ಹಜಾರೆ ಅವರ ಈ ಧರಣಿಗೆ ಬೃಹತ್ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಆರೋಪ: ಈ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಅಣ್ಣಾ ಹಜಾರೆ ಆರೋಪಿಸಿದ್ದಾರೆ. ಸರ್ಕಾರ, ರೈತರು ಆಗಮಿಸುತ್ತಿರುವ ರೈಲುಗಳನ್ನು ರದ್ದು ಮಾಡುವ ಮೂಲಕ ಪರೋಕ್ಷವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ರೈಲುಗಳನ್ನು ತಡೆಹಿಡಿಯುತ್ತಿರುವ ಸರ್ಕಾರದ ಕ್ರಮ ಸರಿ ಇಲ್ಲ ಎಂದರು. ರೈತರ ಬೆಳೆಗೆ ಸೂಕ್ತ ಬೆಲೆ ನೀಡುವವರೆಗೂ ಹಾಗೂ ಲೋಕಪಾಲ ನೇಮಕ ಮಾಡುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಧರಣಿಗೆ ದೇಶದ ನಾನಾ ಭಾಗಗಳಿಂದ ರೈತರ ಆಗಮಿಸುತ್ತಿದ್ದಾರೆ.