‘ಇಂದಿನ ಯುವಜನತೆಯ ಮುಂದೆ ತಂತ್ರಜ್ಞಾನವಿದೆ. ಮೊಬೈಲ್ ಮೂಲಕ ಇಡೀ ಜಗತ್ತನ್ನೇ ಕಾಣುವ ಅವಕಾಶವಿದೆ. ಆದರೆ ‘ದೀಪದ ಕೆಳಗೆ ಕತ್ತಲು’ ಎಂಬಂತೆ ನಮ್ಮನ್ನು ತಿದ್ದಿಕೊಳ್ಳಲು ಅದರ ನೆರವು ಹೆಚ್ಚಿಲ್ಲ. ಹಾಗಾಗಿ ನಮ್ಮ ಮನಸ್ಸುಗಳನ್ನು ಸಂಸ್ಕಾರಕ್ಕೆ ಒಡ್ಡಿಕೊಳ್ಳಲು, ಸುತ್ತಲನ್ನು ಅರಿತುಕೊಳ್ಳಲು, ಬಾಳಿನಲ್ಲಿ ಬರುವ ಎಲ್ಲವನ್ನೂ ಸ್ವೀಕರಿಸಲು, ಸಾರ್ಥಕವಾಗಿ ಬದುಕಲು, ಜ್ಞಾನವಂತರಾಗಲು, ಹುದ್ದೆ ಪಡೆಯಲು ಪ್ರತಿಯೊಬ್ಬರಿಗೂ ಪುಸ್ತಕಗಳ ನೆರವು ಬೇಕಿದೆ’ ಎಂದು ಹೇಳಿದರು. ‘ನನ್ನ ಪಾಡಿಗೆ ಹವ್ಯಾಸವೆಂದು ರೂಢಿಸಿಕೊಂಡ ಪುಸ್ತಕ ಪ್ರೀತಿ ಇಂದಿಗೆ ಅಗಾಧವಾಗಿ ಬೆಳೆದು ನಿಂತಿದೆ. ಹರಳಹಳ್ಳಿ ಗ್ರಾಮದಲ್ಲಿರುವ ಎಂ.ಅಂಕೇಗೌಡ ಜ್ಞಾನ ಪ್ರತಿಷ್ಠಾನದ ನನ್ನ ‘ಪುಸ್ತಕದ ಮನೆ’ ಗ್ರಂಥಾಲಯವಾಗಿ ಉಳಿಯದೇ ಅದು ಪ್ರತಿಯೊಬ್ಬರಲ್ಲೂ ಪುಸ್ತಕ ಪ್ರೀತಿ ಹುಟ್ಟುಹಾಕಬೇಕು’ ಎಂದು ಆಶಯ ವ್ಯಕ್ತಪಡಿಸಿದರು.