ಕಾರ್ಗಲ್: ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರಕಾರ್ಮಿಕರಿಗೆ ಸಕಾಲಕ್ಕೆ ಮಾಸಿಕ ವೇತನ ಪಾವತಿಯಾಗುವಂತೆ ನೋಡಿ ಕೊಳ್ಳಬೇಕು ಎಂದು ಇಲ್ಲಿನ ಜೋಗ– ಕಾರ್ಗಲ್ ಪಟ್ಟಣ ಪಂಚಾಯ್ತಿಯಲ್ಲಿ ಬುಧವಾರ ನಡೆದ ಮಾಸಿಕ ವಿಶೇಷ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು.
ಸಂಬಳ ಪಾವತಿ ವಿಳಂಬ ಆಗುತ್ತಿರು ವುದರಿಂದ ಪೌರಕಾರ್ಮಿಕರು ಅಧಿಕ ಬಡ್ಡಿಗೆ ಸಾಲ ಪಡೆಯುವಂತಾಗುತ್ತಿದೆ. ಇದರಿಂದ ಅವರ ಜೀವನ ಮಟ್ಟದಲ್ಲಿ ಸುಧಾರಣೆಯಾಗುತ್ತಿಲ್ಲ ಎಂದು ಸದಸ್ಯೆ ಸಲೀಲಾಬಿ ವಿಷಯ ಪ್ರಸ್ತಾಪಿಸಿದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷೆ ಶ್ರೀಮತಿ ಸುಂಕದಮನೆ ಮುಖ್ಯಾಧಿಕಾರಿಗೆ ಸೂಚಿಸಿದರು.
2018 ಮತ್ತು 19ನೇ ಸಾಲಿಗೆ ಸ್ವಚ್ಛತೆ ಮತ್ತು ಬೀದಿ ದೀಪಗಳ ನಿರ್ವಹಣೆಯ ಗುತ್ತಿಗೆಯನ್ನು ನೀಡಲು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.
ಸಂತೆ ಮಾರುಕಟ್ಟೆ ಸುಂಕ ವಸೂಲಿ ಹರಾಜಿನ ವಿಚಾರ ಚರ್ಚೆಗೆ ಬಂದಾಗ, ಮಾರುಕಟ್ಟೆಯಲ್ಲಿ ಬೀದಿ ದಿನಗಳ ಹಾವಳಿಯನ್ನು ತಪ್ಪಿಸಲು ಕ್ರಮ ಕೈಗೊಂಡ ಬಳಿಕವೇ ಸುಂಕ ವಸೂಲಿ ಹರಾಜಿಗೆ ಅನುಮೋದನೆ ನೀಡಬೇಕು ಎಂದು ಸದಸ್ಯ ಗುರುಸಿದ್ಧಾಚಾರಿ ಒತ್ತಾಯಿಸಿದರು.
ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಅಳವಡಿಸುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯ ವೇಗವನ್ನು ಹೆಚ್ಚಿಸಲು ಪಂಚಾಯ್ತಿ ಆಡಳಿತವು ಇನ್ನಷ್ಟು ಚುರುಕಾಗಬೇಕು ಎಂದು ಶ್ರೀಮತಿ ಸುಂಕದಮನೆ ಸೂಚಿಸಿದರು.