ಬಾಗಲಕೋಟೆ: ಎಲ್ಲರೂ ಒಗ್ಗಟ್ಟಾಗಿ ನಡೆಯಬೇಕೆಂಬ ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ಣಯ ಸೂಕ್ತವಾಗಿದೆ ಎಂದು ತೋಟಗಾರಿಕೆ ಸಚಿವ ಶಾಮನೂರು ಮಲ್ಲಿಕಾರ್ಜುನ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಮತ್ತು ಲಿಂಗಾಯತರಿಗೆ ಸಂಬಂಧವೇ ಇಲ್ಲ ಎಂದು ಸಚಿವ ಎಂ. ಬಿ. ಪಾಟೀಲ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದರು.
ಒಂದು ಮನೆಯಲ್ಲಿ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಕೆಲವರು ಮನೆ ಉದ್ಧಾರ ಮಾಡಿದರೆ, ಕೆಲವರು ಮನೆ ಹಾಳು ಮಾಡುವವರು ಇರುತ್ತಾರೆ ಎಂದು ಪರೋಕ್ಷವಾಗಿ ಎಂ. ಬಿ. ಪಾಟೀಲಗೆ ಕುಟುಕಿದ ಅವರು ಯಾರು ಮನೆ ಹಾಳು ಮಾಡುತ್ತಿದ್ದಾರೋ ಅವರ ಬಗ್ಗೆ ಮುಂದೆ ನೋಡೋಣ ಎಂದರು.
ಇನ್ನು ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹಿಂದೆ ಮನವಿ ಸಲ್ಲಿಸಲಾಗಿತ್ತು. ಅದು ತಿರಸ್ಕಾರವಾಗಿಲ್ಲ. ಹಾಗಾಗಿ ಕೇಂದ್ರಕ್ಕೆ ಮರುಪರಿಶೀಲನೆ ಮಾಡಲು ಕೋರಲಾಗುವುದು. ಈ ವಿಚಾರವನ್ನು ರಾಜಕಾರಣಕ್ಕೆ ಎಳೆದು ತರುವುದು ಬೇಡ ಎಂದರು.