ದಾವಣಗೆರೆ: ‘ನಾಲೆಯ ಹೂಳೆತ್ತಿಸುವ ಮೂಲಕ ಈ ಬಾರಿ ಕೊನೇ ಭಾಗಕ್ಕೂ ನೀರು ಹರಿಸಲಾಗುವುದು. ಧೈರ್ಯಗೆಡದೆ ಭತ್ತ ಬೆಳೆಯಿರಿ. ನಿಮ್ಮ ಜತೆ ನಾನಿದ್ದೇನೆ’ ಎಂದು ಭ್ರಾ ಅಚ್ಚುಕಟ್ಟಿನ ಕೊನೇ ಭಾಗದ ರೈತರಿಗೆ ಶಾಸಕ ಎಸ್.ಎ. ರವೀಂದ್ರನಾಥ್ ಸ್ಥೈರ್ಯ ತುಂಬಿದರು.
ತಾಲ್ಲೂಕಿನ ಕಡ್ಲೇಬಾಳ್, ಅರಸಾಪುರ, ಮಾಗನಹಳ್ಳಿ, ಆವರಗೆರೆ, ಕಕ್ಕರಗೊಳ್ಳ, ಕೊಂಡಜ್ಜಿ ಹಳ್ಳಿಗಳಿಗೆ ಸೋಮವಾರ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಅವರು ಮಾತನಾಡಿದರು.
ನಾಲಾ ಭಾಗದಲ್ಲಿ ಹೋಳೆತ್ತದಿರುವುದರಿಂದ ಕೊನೇಭಾಗದ 30 ಸಾವಿರ ಎಕರೆ ಪ್ರದೇಶಕ್ಕೆ ನೀರು ತಲುಪಿಲ್ಲ. ನೀರಾವರಿ ಸಚಿವರಲ್ಲಿ ಒತ್ತಡ ತಂದ ಬಳಿಕ ₹ 16.5 ಲಕ್ಷ ಅಂದಾಜು ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಅದೂ ಸಾಹಸದ ಕೆಲಸ. ಅಧಿಕಾರಿಗಳು ತ್ವರಿತವಾಗಿ ಕೆಲಸ ಮುಗಿಸಿ ರೈತರಿಗೆ ನೀರು ಕೊಡಬೇಕು ಎಂದು ಸೂಚಿಸಿದರು.
ನೀರು ತಲುಪದಿರಲು ನೀರಾವರಿ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವುದೇ ಕಾರಣ ಎಂದು ರೈತರು ದೂರಿದರು.
ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿಲ್ಲ. ಮಳೆಯಾಗಿದ್ದರಿಂದ ನಾಲೆಗಳಲ್ಲಿ ಹೂಳು ತುಂಬಿದೆ. 2 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಹೂಳೆತ್ತುವ ಕಾಮಗಾರಿ ಪ್ರಾರಂಭವಾಗಲಿದೆ. 15 ದಿನಗಳಲ್ಲಿ ನೀರು ಒದಗಿಸಲಾಗುವುದು ಎಂದು ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿಕಾಸ್ ಸ್ಪಷ್ಟನೆ ನೀಡಿದರು.
ನೀರಾವರಿ ಇಲಾಖೆಯ ಎಂಜಿನಿಯರ್ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಶೀಘ್ರದಲ್ಲಿ ನೀರು ಕಲ್ಪಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.