ನವದೆಹಲಿ/ಚಂಡಿಗಡ: ಯುದ್ಧಪೀಡಿತ ಇರಾಕ್ನಲ್ಲಿ ಐಎಸ್ ಉಗ್ರರಿಂದ ಹತ್ಯೆಯಾದ 39 ಮಂದಿ ಭಾರತೀಯರ ಮೃತದೇಹಗಳನ್ನು ಇನ್ನೊಂದು ವಾರದಲ್ಲಿ ಭಾರತಕ್ಕೆ ತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಸ್ವರಾಜ್, ಈ ಭರವಸೆ ನೀಡಿದ್ದಾರೆ. ‘ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಶೀಘ್ರದಲ್ಲೇ ಇರಾಕ್ಗೆ ತೆರಳಿ ಇಡೀ ಪ್ರಕ್ರಿಯೆಯ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಮೃತ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಒದಗಿಸುವುದೂ ಸೇರಿದಂತೆ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸ್ವರಾಜ್ ತಿಳಿಸಿದರು’ ಎಂದು ಮೃತರಲ್ಲಿ ಒಬ್ಬರಾದ ಗೋಬಿಂದರ್ ಸಿಂಗ್ ಅವರ ಸಹೋದರ ದೇವಿಂದರ್ ಸಿಂಗ್ ತಿಳಿಸಿದ್ದಾರೆ.